ವೇಣೂರು: ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ನಿಜವಾಗಿಯೂ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಕೇಂದ್ರಗಳಾಗಿವೆ ಇಂತಹ ಶಾಲೆಗಳ ವಿದ್ಯಾರ್ಥಿಗಳನ್ನು ಹಾಗೂ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಮಾಜದ ಸರ್ವರ ಪ್ರೋತ್ಸಾಹ ಅಗತ್ಯವಿದೆ. ಶಾಲಾ ಎಸ್.ಡಿ.ಎಂ.ಸಿ, ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವೃಂದ ಹಾಗೂ ಪೋಷಕರು ಸಹಕಾರವಿದ್ದಾಗ ಮಾತ್ರ ಗ್ರಾಮೀಣ ಪ್ರದೇಶಗಳ ಶಾಲೆಗಳ ಉನ್ನತಿ ಸಾಧ್ಯ ಎಂದು ಮರೋಡಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕೇಸ್ತರ ಹಾಗೂ ಮೂಡುಬಿದಿರೆ ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಹೇಮರಾಜ್ ಬೆಳ್ಳಿಬೀಡು
ಹೇಳಿದರು.
ಅವರು ಕರಿಮಣೇಲು ಗ್ರಾಮದ ತಿಮ್ಮಣಬೆಟ್ಟು ಸರಕಾರಿ ಉ.ಹಿ.ಪ್ರಾ ಶಾಲಾ ಮಕ್ಕಳಿಗೆ ತಮ್ಮ ವೈಯಕ್ತಿಕ ನಿಧಿಯಿಂದ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಇಡೀ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ನೋಟ್ ಪುಸ್ತಕಗಳನ್ನು ಮತ್ತು ಇತರ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು. ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿದ ಅವರು ಈ ದಿನದಂದು ವಿತರಿಸಿದ ಪುಸ್ತಕಗಳನ್ನು ಸದುಪಯೋಗ ಪಡಿಸಿಕೊಂಡು ತಾವು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ, ನಿಮ್ಮೊಂದಿಗೆ ನಿಮ್ಮ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕವೃಂದ, ಪೋಷಕರು ಬೆಂಬಲವಾಗಿ ಇರುತ್ತಾರೆ, ಕಲಿಕೆಯಲ್ಲಿ ಉತ್ತಮ ಆಸಕ್ತಿಯನ್ನು ವಹಿಸಿ ತಮ್ಮ ಸಾಧನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಶಾಲೆಗೆ, ಊರಿಗೆ ಮತ್ತು ನಿಮ್ಮ ಹೆತ್ತವರಿಗೆ ಕೀರ್ತಿ ತರಬೇಕೆಂದರು.

ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಭಾಗವಹಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ಸುಮ, ಮರಾಠಿ ಸೇವಾ ಸಂಘದ ಅಧ್ಯಕ್ಷ ವಿಠಲ ನಾಯ್ಕ, ಮಾಜಿ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಸಚಿನ್ ಬೇಗೂರ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಗಾಯತ್ರಿ ಪ್ರಶಾಂತ್ ಅತಿಥಿಗಳಾದ ಕೆ. ಹೇಮರಾಜ್ ರವರನ್ನು ಸಭೆಗೆ ಪರಿಚಯಿಸಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜುನಾಯ್ಕ ವಂದಿಸಿದರು.