ಶಿಶಿಲ: ಗ್ರಾಮದ ಅಡ್ಡಹಳ್ಳ ಯೋಗೀಶ ದಾಮ್ಲೆ ಅವರ ದನದ ಹಟ್ಟಿಗೆ ಜೂ. 24ರಂದು ಸಂಜೆ ಸುಮಾರು ಐದು ಗಂಟೆಗೆ ಮರವೊಂದು ಬಿದ್ದ ಪರಿಣಾಮ ಬಳಿಯಲ್ಲೇ ಹಾದು ಹೋದ ವಿದ್ಯುತ್ ತಂತಿಗಳು ಹಾಗೂ ಕಂಬ ತುಂಡಾದುದಲ್ಲದೆ ದನದ ಹಟ್ಟಿಯ ಛಾವಣಿ ಭಾಗಶಃ ಹಾನಿಗೊಂಡಿತ್ತು.
ಮನೆಯವರ ಕರೆಗೆ ತಕ್ಷಣ ಸ್ಪಂದಿಸಿದ ಶೌರ್ಯ ಸ್ವಯಂಸೇವಕರಾದ ಅವಿನಾಶ್ ಭಿಡೆ , ಕಿರಣ್ ಸಂಕೇಶ , ರಾಧಾಕೃಷ್ಣ ಗುತ್ತು ಹಾಗೂ ರಮೇಶ ಬೈರಕಟ್ಟ ಅವರು ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಪವರ್ ಮ್ಯಾನ್ ಗಳಿಗೆ ಮಾಹಿತಿ ನೀಡಿ ವಿದ್ಯುತ್ ನಿಲುಗಡೆಗೊಳಿಸಿ ಅವರ ಸಲಹೆಯಂತೆ ಮರವನ್ನು ತೆರವುಗೊಳಿಸಿ ಸೋರುತ್ತಿದ್ದ ಛಾವಣಿಗೆ ತಾತ್ಕಾಲಿಕವಾಗಿ ಟಾರ್ಪಲ್ ಹೊದಿಸಿದರು.
ಸ್ಥಳೀಯರಾದ ರಾಧಾಕೃಷ್ಣ ದಾಮ್ಲೆ, ಗೌರಿ ಹಾಗೂ ಸುನಿಲ್ ಗೋಖಲೆ ಸಹಕರಿಸಿದರು. ಯೋಗೀಶ್ ದಾಮ್ಲೆ ದಂಪತಿಗಳು ಸ್ವಯಂ ಸೇವಕರಿಗೆ ಲಘು ಉಪಾಹಾರವನ್ನು ನೀಡಿದರು.