ಬೆಳ್ತಂಗಡಿ: ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ಮತ್ತು ಅಧಿಕಾರಿಗಳಿಗೆ ಬೆದರಿಕೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬೆಳ್ತಂಗಡಿಯಲ್ಲಿ ಜೂ.24ರಂದು ಪ್ರತಿಭಟನೆ ನಡೆಯಿತು.
ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಮುಸ್ಲಿಂರು ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿ ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡುವಂತೆ ಅಧಿಕಾರಿಗಳಲ್ಲಿ ಕೋರಿದ ಹಿನ್ನಲೆಯಲ್ಲಿ ಈ ಕುರಿತು ರೈತರು ಮಹದೇವಪುರದಲ್ಲಿ ಶ್ರೀರಂಗ ಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಜೊತೆ ನಡೆದ ಸಭೆಯಲ್ಲಿ, ಮುಸ್ಲಿಮರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದಾಗ, ʼಜಮೀನು ಉಳುವವರು ನನ್ನ ಬಳಿ ಬಂದಿದ್ದರು. ನಾನು ದರ್ಖಾಸ್ತು ಮುಂದಕ್ಕೆ ನೋಡುವ, ಸಧ್ಯಕ್ಕೆ ಏನೂ ಮಾಡುವುದಕ್ಕೆ ಆಗಲ್ಲ ಎಂದು ಹೇಳಿದ್ದೇನೆ. ಸರಕಾರಿ ಭೂಮಿಯನ್ನು ಸಾಬರ(ಮುಸ್ಲಿಮರ) ಹೆಸರಿಗೆ ಮಾಡಿದ್ರೆ, ಅಂತಹವರನ್ನು ನೇಣಿಗೆ ಹಾಕುವುದು ಗ್ಯಾರೆಂಟಿ ಎಂದು ಕಾಂಗ್ರೆಸ್ ಶಾಸಕ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಮೂಲಕ ಸಂವಿಧಾನಾತ್ಮಕ ಪ್ರಕ್ರಿಯೆಗೆ ಸವಾಲು ಎಸೆದಿದ್ದಾರೆ. ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಆಗ್ರಹಿಸಿದರು.
ಪ್ರತಿಭಟನೆ ಕೊನೆಯಲ್ಲಿ ಶಾಸಕ ಸ್ಥಾನವನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು. ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಸ್ವಾಲಿ ಮದ್ದಡ್ಕ, ಸಲೀಂ ಗುರುವಾಯನಕೆರೆ, ಅಶ್ರಫ್ ಕಟ್ಟೆ, ಮುಸ್ತಾಫ ಬಂಗೇರಕಟ್ಟೆ, ಮಹಮ್ಮದ್ ಆಲಿ ಉಜಿರೆ, ರೌಫ್ ಪುಂಜಾಲಕಟ್ಟೆ, ರಿಯಾಝ್ ಬೆಳ್ತಂಗಡಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.