ಬೆಳ್ತಂಗಡಿ: “ಯೋಗದಿಂದ ದೈಹಿಕ ಆರೋಗ್ಯದ ಜೊತೆಗೆ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಿಕೊಂಡು ಮಕ್ಕಳು ಕಲಿಕೆಯಲ್ಲಿ ಉನ್ನತಿಯನ್ನು ಸಾಧಿಸಬಹುದು” ಎಂದು ಮುಖ್ಯೋಪಾಧ್ಯಾಯ ಫಾ. ಕ್ಲಿಫರ್ಡ್ ಪಿಂಟೋ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜೂ.21ರಂದು ನಡೆದ ವಿಶ್ವ ಯೋಗ ದಿನಾಚರಣೆಯಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗ ಚಿಕಿತ್ಸೆಯ ವಿಭಾಗದ ವೈದ್ಯಾಧಿಕಾರಿ ಡಾ.ರೋಹನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೊತೆಗೆ ವಿವಿಧ ಯೋಗಾಸನಗಳ ಭಂಗಿಗಳನ್ನು ಮಾಡುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸುವುದರ ಜೊತೆಗೆ ಅವುಗಳ ಆರೋಗ್ಯಕಾರಿ ಮಹತ್ವವನ್ನು ವಿವರಿಸಿದರು.

ಸಹ ಶಿಕ್ಷಕಿ ರೆನಿಟಾ ಲಸ್ರಾದೋ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ವಿದ್ಯಾರ್ಥಿಗಳೆಲ್ಲರೂ ಲಘು ವ್ಯಾಯಾಮ, ಪ್ರಾಣಾಯಾಮ, ಸೂರ್ಯ ನಮಸ್ಕಾರದ ಜೊತೆಗೆ ಯೋಗದ ಹಲವು ಆಸನಗಳನ್ನು ಅತ್ಯುತ್ಸಾಹದಿಂದ ಮಾಡಿದರು. ವಿದ್ಯಾರ್ಥಿನಿಯಾದ ಜಿಯಾ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು.