ಬೆಳ್ತಂಗಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್ ವಾದ) ಸಂಘಟನಾ ಸಂಚಾಲಕ ಚಂದು ಎಲ್. ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯು ಜೂ.22ರಂದು ಬೆಳ್ತಂಗಡಿಯ ಶ್ರೀ ನಾರಾಯಣಗುರು ಸಭಾ ಭವನದಲ್ಲಿ ನೆರವೇರಿತು.ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಪ್ರಧಾನ ಸಂಚಾಲಕ ರಮೇಶ್ ಆರ್. ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಚಂದು ಎಲ್. ಅವರ ಒಡನಾಟದ ದಿನಗಳನ್ನು ಸ್ಮರಿಸಿಕೊಂಡು ಚಂದು ಅವರ ಅಭಿಮಾನಿಗಳಾಗಬೇಡಿ ಅನುಯಾಯಿಗಳಾಗಿ ಎಂದು ತಿಳಿಸಿದರು.
ಮಾಜಿ ಸಂಚಾಲಕ ಕೆ.ನೇಮಿರಾಜ್ ಕಿಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದಿ.ಚಂದು ಎಲ್. ಅವರ ಸಂಘಟನಾ ಚತುರತೆ, ನೇರ ನಡೆನುಡಿಯ ನಿಷ್ಠುರ ವ್ಯಕ್ತಿತ್ವದ ಬಗ್ಗೆ ನೆನಪಿಸಿಕೊಂಡು ಅವರ ಸಂಘಟನಾ ಚತುರತೆ ಕಾರ್ಯಕರ್ತರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದರು.ಮೈಸೂರು ವಿಭಾಗೀಯ ಸಂಚಾಲಕ ಬಿ.ಕೆ. ವಸಂತ್, ತಾಲೂಕು ದಲಿತ ಮಹಿಳಾ ಒಕ್ಕೂಟದ ಮಾಜಿ ಸಂಚಾಲಕಿ ಕವಿತಾ ಕುಮಾರಿ ಮಾಜಿ ಸಂಚಾಲಕ ವೆಂಕಣ್ಣ ಕೊಯ್ಯೂರು ಮಾತನಾಡಿ ಒಡನಾಟದ ದಿನಗಳನ್ನು ನೆನಪಿಸಿಕೊಂಡರು.

ವೇದಿಕೆಯಲ್ಲಿ ಚಂದು ಎಲ್. ಅವರ ಪತ್ನಿ ಅಪ್ಪಿಲತಾ ಉಪಸ್ಥಿತರಿದ್ದರು. ಮಾಜಿ ಜಿ.ಪಂ ಸದಸ್ಯ, ದಸಂಸ ಮುಖಂಡ ಶೇಖರ್ ಕುಕ್ಕೇಡಿ, ಸಂಜೀವ ಆರ್., ಚೆನ್ನಕೇಶವ, ಮುಖಂಡರಾದ ಸೇಸಪ್ಪ ನಲಿಕೆ, ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್ ಶಾಂತಿಕೋಡಿ, ಕೂಸ ಅಳದಂಗಡಿ, ನಾರಾಯಣ ಪುದುವೆಟ್ಟು, ಯುವ ಉದ್ಯಮಿ ಪ್ರಶಾಂತ್, ಸಾಮಾಜಿಕ ಕಾರ್ಯಕರ್ತ ಶೇಖರ್ ಎಲ್. ಮತ್ತಿತರರು ಉಪಸ್ಥಿತರಿದ್ದರು.ಮುಖಂಡ ಶ್ರೀಧರ ಕಳೆಂಜ ಕಾರ್ಯಕ್ರಮ ನಿರೂಪಿಸಿದರು.