ಬೆಳಾಲು: ಮಾಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಸಮಿತಿಯ ನೂತನ ಅಧ್ಯಕ್ಷರಾಗಿ ಶಿಲ್ಪಕಲಾ ಅಕಾಡೆಮಿ ಕಲಾಕೃತಿ ಪ್ರಶಸ್ತಿ ವಿಜೇತ ಶಿಲ್ಪಿ ಶಶಿಧರ ಆಚಾರ್ಯ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ಶಾಲೆಯ ಸರ್ವಾಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ಸುರೇಂದ್ರ ಗೌಡ ಸುರಳಿ ಇವರ ಸ್ಥಾನ ತೆರವಾಗಿದ್ದರಿಂದ ಜೂ. 20ರಂದು ಪೋಷಕರು ಹಾಗೂ ಎಸ್. ಡಿ. ಎಂ. ಸಿ ಸಭೆ ಕರೆದು ಇಲಾಖಾ ನಿಯಮಾವಳಿಯಂತೆ, ತೆರವಾದ ಸ್ಥಾನಕ್ಕೆ ಇತರೆ ಹಿಂದುಳಿದ ವರ್ಗದ ಸದಸ್ಯರಾಗಿ ಸುರೇಶ್ ಅವರನ್ನು ಆಯ್ಕೆಮಾಡಿಕೊಳ್ಳಲಾಯಿತು. ನಂತರ ಎಸ್.ಡಿ.ಎಂ.ಸಿಯ ಸದಸ್ಯರೆಲ್ಲ ಸೇರಿ ಶಶಿಧರ ಶಿಲ್ಪಿ ಯವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡರು.

ಮಾತನಾಡಿದ ಸುರೇಂದ್ರ ಗೌಡ ಸುರಳಿ ತಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಿದ ಎಸ್.ಡಿ.ಎಂ.ಸಿಯ ಎಲ್ಲಾ ಸದಸ್ಯರಿಗೆ, ದಾನಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದೆಯೂ ಶಾಲೆಯ ಅಭಿವೃದ್ಧಿಗೆ ಜೊತೆಗಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದು, ಮುಖ್ಯ ಶಿಕ್ಷಕ ವಿಠಲ ಎಂ. ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿ, ಜಿಪಿಟಿ ಶಿಕ್ಷಕ ಯೋಗೇಶ್ ಹೆಚ್.ಆರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ಎಂ.ಎಸ್ ಸಹಕರಿಸಿದರು. ಶಿಕ್ಷಕಿ ಜಾನ್ಸಿ ಸಿ.ವಿ. ವಂದಿಸಿದರು.