ಬೆಳ್ತಂಗಡಿ: ಇಸ್ರೇಲ್-ಇರಾನ್ ಯುದ್ಧದ ಹಿನ್ನಲೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿ ಧರ್ಮಪ್ರಾಂತ್ಯದ ಎಲ್ಲಾ ಧರ್ಮಗುರುಗಳೊಂದಿಗೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿಯವರು ಜೂ.17ರಂದು ವಿಶೇಷ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಿದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ, ದಕ್ಷಿಣ ಕನ್ನಡ-ಬೆಳ್ತಂಗಡಿ ಪ್ರದೇಶದಿಂದ ಬಹಳಷ್ಟು ಸಹೋದರ -ಸಹೋದರಿಯರು ಇಸ್ರೇಲಿನಲ್ಲಿ ಉದ್ಯೋಗದಲ್ಲಿರುವುದು ಹಾಗು ಇರಾನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಕುರಿತು ವಿಶೇಷ ಕಾಳಜಿ ವ್ಯಕ್ತಪಡಿಸಿದ ಧರ್ಮಾಧ್ಯಕ್ಷ “ಶಾಂತಿಗಾಗಿ ಎಲ್ಲರು ಪ್ರಾರ್ಥಿಸಬೇಕು, ಯುದ್ಧದ ಭೀತಿ ಅಗಲಿಹೋಗಲಿ. ಈ ಸಂಕಟದ ಸಂದರ್ಭದಲ್ಲಿ ನಾವು ಎರಡೂ ರಾಷ್ಟ್ರಗಳ ಜನತೆಗೆ ಮಾನವೀಯ ಸಹಾಯ ನೀಡುವಂತೆ ಜಾಗತಿಕ ಸಮುದಾಯವನ್ನು ವಿನಂತಿಸುತ್ತೇವೆ.’ ಹೇಳಿದರು.
ಇಸ್ರೇಲ್ ಮತ್ತು ಇರಾನ್ ನಡುವಿನ ತೀವ್ರತೆಯಿಂದ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಬಗ್ಗೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಶಾಂತಿ ಮತ್ತು ಮಾನವ ಹಕ್ಕುಗಳ ವೇದಿಕೆ ತನ್ನ ಗಂಭೀರ ಚಿಂತೆಗಳನ್ನು ವ್ಯಕ್ತಪಡಿಸುತ್ತಿದೆ. ಈ ಯುದ್ಧದಿಂದ ಮಾತ್ರ ಆ ಪ್ರದೇಶದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿ ಶಾಂತಿ, ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೂ ಅಪಾಯ ಉಂಟಾಗಿದೆ.
ಯುದ್ಧದಲ್ಲಿ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿ ಪರದಾಡುತ್ತಿದ್ದಾರೆ. ಹಾಸ್ಪಿಟಲ್, ಶಾಲೆಗಳು ಮತ್ತು ನಾಗರಿಕ ಸೌಲಭ್ಯಗಳು ಧ್ವಂಸವಾಗುತ್ತಿವೆ. ಇಂತಹ ಹಿಂಸಾತ್ಮಕ ಕೃತ್ಯಗಳು ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಯುದ್ಧವು ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಮಾತುಕತೆ, ಸಂವಾದ ಮತ್ತು ಪರಸ್ಪರ ಗೌರವವೇ ಶಾಶ್ವತ ಶಾಂತಿಯ ಮಾರ್ಗವಾಗಿದೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ಸುನಿಲ್ ಐಸಾಕ್ ತಿಳಿಸಿದರು.