ಗುರುವಾಯನಕೆರೆ: ಹಣದ ಹಿಂದೆ ಹೋದವರು ಗೆದ್ದಿಲ್ಲ. ಗುರಿಯ ಹಿಂದೆ ಹೋದವರು ಗೆದ್ದಿದ್ದಾರೆ ಹಾಗೂ ಹಣವನ್ನೂ ಗಳಿಸಿದ್ದಾರೆ. ಹೀಗಾಗಿ ಅಚಲವಾದ ಗುರಿ ನಿಮ್ಮಲ್ಲಿದ್ದರೆ ಗೆಲುವನ್ನು ಸಾಧಿಸಬಹುದು, ಆಗ ತಾನಾಗಿಯೇ ಹಣ ಸಂಪಾದನೆ ಯಾಗುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ. ಬಿ.ವಿ. ಸೂರ್ಯನಾರಾಯಣ ಅವರು ಹೇಳಿದರು. ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾ ಸಾಗರ ಕ್ಯಾಂಪಸ್ ನಲ್ಲಿ ‘ ದೃಷ್ಟಿ 2025 ‘ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಓರಿಯಂಟೇಶನ್ ಉದ್ಘಾಟಿಸಿ ಅವರು ಮಾತನಾಡಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಅಧ್ಯಕ್ಷತೆ ವಹಿಸಿ, ನಮ್ಮ ಕಾಲೇಜಿನ ಶೈಕ್ಷಣಿಕ ಸಾಧನೆಯ ಬಗ್ಗೆ ನಾವು ಹೇಳುವುದಕ್ಕಿಂತ ನಮ್ಮ ಫಲಿತಾಂಶವೇ ಹೇಳುತ್ತದೆ. ವಿಜ್ಞಾನ ವಿಭಾಗದ ಎಲ್ಲಾ ಕೋಚಿಂಗ್ ನಮ್ಮಲ್ಲಿದೆ. ಬಳಸಿಕೊಳ್ಳುವ ಬುದ್ಧಿವಂತಿಕೆ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದರು.

ಪ್ರಾಂಶುಪಾಲ ನವೀನ್ ಕುಮಾರ್ ಎಂ. ಅವರು ಪ್ರಾಸ್ತಾವಿಕ ಮಾತಿನಲ್ಲಿ, ‘ ಕನಸುಗಳು ನನಸಾಗಬೇಕಾದರೆ ಶ್ರಮ ಪಡುವುದನ್ನು ರೂಢಿಸಿ ಕೊಳ್ಳಬೇಕು. ನಿರಂತರವಾದ ಪರಿಶ್ರಮವೇ ನಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ‘ ಎಂದು ಹೇಳಿ, ಸ್ವಾಗತಿಸಿದರು.
ಉಪನ್ಯಾಸಕ ಡಾ. ಸತ್ಯ ನಾರಾಯಣ ಭಟ್ – ಸಿ.ಇ.ಟಿ, ಪ್ರವೀಣ್ ಪಾಟೀಲ್ – ಜೆ.ಇ.ಇ, ಶ್ರೀನಿಧಿ ರಾಜ್ ಶೆಟ್ಟಿ – ನೀಟ್, ಜೋಸ್ಟಮ್ ಎ.ಟಿ. – ಎನ್.ಡಿ.ಎ., ವರುಣ್ ದೇವ್ – ನಾಟಾ, ಹಾಗೂ ಪ್ರೊ. ರಾಜು ಬೆಳ್ಳುಂಡಗಿ – ಬಿ.ಎಸ್.ಸಿ ಅಗ್ರಿ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರಾದ ಗಾಯನ , ಅನುಷ್ಕಾ ಶೆಟ್ಟಿ, ಪ್ರೇಕ್ಷಾ ಜೈನ್, ಸುಭಿಕ್ಷಾ, ಗಾಯತ್ರಿ ಕೆ., ಚೈತ್ರ ಎಂ.ಜಿ. ಪ್ರಾರ್ಥಿಸಿದರು. ಉಪನ್ಯಾಸಕ ಮೊಹಮ್ಮದ್ ಮನೀರ್ ನಿರೂಪಿಸಿದರು. ದಿಶಾ ವಂದಿಸಿದರು.