ವೇಣೂರು: ನಿಟ್ಟಡೆ ಶಾಖಾ ಅಂಚೆ ಕಚೇರಿಯಲ್ಲಿ ಸುಧೀರ್ಘ 42 ವರ್ಷ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿಶ್ವನಾಥ ಎಂ. ಇವರಿಗೆ ಜೂ. 9ರಂದು ವೇಣೂರು ಉಪ ಅಂಚೆ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಉಪ ಅಂಚೆ ಕಚೇರಿಯ ಪಾಲಕ ರಮೇಶ್ ವಹಿಸಿದ್ದರು. ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ, ಬೆಳ್ತಂಗಡಿ ಅಂಚೆ ಕಚೇರಿಯ ಸಹಾಯಕ ಅಂಚೆ ಅಧೀಕ್ಷಕ ಮೋಹನ್, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ, ಪೆರ್ಮುಡ ಕಂಬಳ ಸಮಿತಿಯ ಅಧ್ಯಕ್ಷ ನಿತೀಶ್ ಹೆಚ್., ಉಜಿರೆ ಶ್ರೀ ಧ.ಮಂ. ಕಾಲೇಜು ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು.
ಕುಕ್ಕೇಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಶೋಕ್ ಪಾಣೂರು, ಕೃಷಿಕ ಕೆ.ವೈ.ಈಶ್ವರ ಭಟ್, ಸಹೋದ್ಯೋಗಿ ವಿಮಲಾ ನಿವೃತ್ತರ ಕುರಿತು ಅನಿಸಿಕೆ ವ್ಯಕ್ತ ಪಡಿಸಿ ನಿವೃತ್ತ ಜೀವನಕ್ಕೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥ ಎಂ. ಪತ್ನಿ ಸರೋಜಿನಿ, ಪುತ್ರಿ ಶ್ರೀರಕ್ಷಾ ಇವರನ್ನು ವೇಣೂರು ಉಪ ಅಂಚೆ ಕಚೇರಿ ವ್ಯಾಪ್ತಿಯ ಎಲ್ಲಾ ಶಾಖಾ ಅಂಚೆ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದು ಸ್ಮರಣಿಕೆ ನೀಡಿ ಗೌರವಿದರು.
ಕಾರ್ಯಕ್ರಮದಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಸದಸ್ಯರಾದ ಗುಣವತಿ ಡಿ., ಜನಾರ್ಧನ ಪೂಜಾರಿ, ಕುಸುಮ, ವೇಣೂರು ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಂತ ಪೂಜಾರಿ, ವ್ಯಾಪ್ತಿಯ ಅಂಚೆ ಕಚೇರಿಗಳ ಸಿಬ್ಬಂದಿ, ಹಿತೈಷಿಗಳು ಹಾಜರಿದ್ದರು.
ಬೆಳ್ತಂಗಡಿ ವಿಭಾಗದ ಅಂಚೆ ಮೇಲ್ವಿಚಾರಕ ಧನಂಜಯ ಸ್ವಾಗತಿಸಿದರು. ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ಮೆನೇಜರ್ ಗುರುಪ್ರಸಾದ್ ಕೆ. ಎಸ್. ಕಾರ್ಯಕ್ರಮ ನಿರೂಪಿಸಿದರು. ವೇಣೂರು ಅಂಚೆ ಸಹಾಯಕ ಉಮೇಶ್ ವಂದಿಸಿದರು.