ಉಜಿರೆ ರತ್ನಮಾನಸದಲ್ಲಿ ಹೊಸ ವಿದ್ಯಾರ್ಥಿಗಳ ಪ್ರವೇಶೋತ್ಸವ: ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು: ಪ್ರಸನ್ನ ಕುಮಾರ್ ಐತಾಳ್

0

ಉಜಿರೆ: ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ 8ನೇ ತರಗತಿ ಹೊಸ ವಿದ್ಯಾರ್ಥಿಗಳ ಪ್ರವೇಶೋತ್ಸವ ಜೂ. 8ರಂದು ನಡೆಯಿತು. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯನ್ನು ಮಾಡಿದ ಉಜಿರೆ ಶ್ರೀ ಧ. ಮಂ. ಕಾಲೇಜು ಸಂಸ್ಕೃತ ಉಪನ್ಯಾಸಕ ಡಾ. ಪ್ರಸನ್ನ ಕುಮಾರ್ ಐತಾಳ್ ಮಾತನಾಡುತ್ತ ವಿದ್ಯಾರ್ಥಿಗಳು ತಾಂತ್ರಿಕ ಜಗತ್ತಿಗೆ ಸಿಲುಕಿ ಕೊಂಡಿದ್ದಾರೆ. ಪೋಷಕರು ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಬೇಕು.

ವಿದ್ಯಾರ್ಥಿ ದಿಸೆಯಲ್ಲಿ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವುದು ಪ್ರಸ್ತುತ ಕಾಲಘಟ್ಟದಲ್ಲಿ ಅತಿ ಅಗತ್ಯ. ಈ ಶಿಕ್ಷಣವನ್ನು ರತ್ನಮಾನಸ ವಿದ್ಯಾರ್ಥಿ ನಿಲಯ ಹಲವಾರು ವರ್ಷಗಳಿಂದ ನೀಡುತ್ತ ಬಂದಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಅನೇಕ ಕ್ಷೇತ್ರದಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿ, ಯಶಸ್ವಿಯಾಗಿರುವಂತಹ ನಿದರ್ಶನಗಳಿವೆ ಎಂದರು.

ಮುಖ್ಯ ಅತಿಥಿಯಾಗಿ ಗುರುವಾಯನಕೆರೆ ಪ್ರೌಢ ಶಾಲೆಯ ರಾಜ್ಯ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ವಿ.ಕೆ . ವಿಟ್ಲ ಮಾತನಾಡುತ್ತ ವ್ಯಕ್ತಿ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರಬೇಕು. ಹಲವಾರು ಮಂದಿಗೆ ಉದ್ಯೋಗವನ್ನು ಕೊಡುವಂತಹ ಶಕ್ತಿಗಳಾಗಬೇಕು, ಅಂಕವೇ ಪ್ರಾದಾನ್ಯತೆ ಅಲ್ಲ ಉತ್ತಮ ನಡವಳಿಕೆ ಅತಿ ಅಗತ್ಯ ಎಂದರು.

ಶಿಸ್ತು, ಸಮಯಪಾಲನೆ, ಸಂಸ್ಕಾರವನ್ನು ರತ್ನಮಾನಸ ಕಲಿಸುತ್ತದೆ. ಕಲಿಕೆಯಲ್ಲಿ ಶ್ರದ್ಧೆ, ವಿನಯ, ತಾಳ್ಮೆ ಬಹಳ ಪ್ರಾಮುಖ್ಯವಾದವು. ಮಕ್ಕಳ ಕಲಿಕೆ ಉತ್ತಮವಾಗಬೇಕಾದರೆ ಪೋಷಕರ ಪಾತ್ರ ಅಮೂಲ್ಯವಾದದ್ದು ಎಂದು ಎಸ್.ಡಿ.ಎಂ. ಡಿ.ಎಡ್. ಕಾಲೇಜಿನ ಉಪನ್ಯಾಸಕ ಮಂಜು ಆರ್. ತಿಳಿಸಿದರು. ಬೆಳ್ತಂಗಡಿ ತಾಲೂಕಿನ ಆರೋಗ್ಯ ಕೇಂದ್ರದ ಹಿರಿಯ ಪರಿವೀಕ್ಷಕ ಸೋಮನಾಥ್ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರತ್ನಮಾನಸ ವಿದ್ಯಾರ್ಥಿ ನಿಲಯದ ಪಾಲಕ ಯತೀಶ್ ಕೆ. ಬಳಂಜ ವಹಿಸಿದರು.

8ನೇ ತರಗತಿಯ ವಿದ್ಯಾರ್ಥಿಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳು ಆರತಿಯನ್ನು ಬೆಳಗಿ ಹಣೆಗೆ ತಿಲಕವನ್ನು ಇಟ್ಟು, ಬರಮಾಡಿಕೊಂಡರು. 8ನೇ ತರಗತಿ ವಿದ್ಯಾರ್ಥಿಗಳಿಗೆ 9ನೇ ತರಗತಿ ವಿದ್ಯಾರ್ಥಿಗಳನ್ನು ಅಣ್ಣಂದಿರನ್ನಾಗಿ ನೀಡಲಾಯಿತು.

ವಿದ್ಯಾರ್ಥಿಗಳಾದ ನಿಶಿತ್ ಹಾಗೂ ರಾಕೇಶ್ ಡಿ.ಆರ್. ಪ್ರಾರ್ಥಿಸಿದರು. ನಿಲಯದ ಅಧ್ಯಾಪಕ ರವಿಚಂದ್ರ ಸ್ವಾಗತಿಸಿದರು. ವಿದ್ಯಾರ್ಥಿ ನಿಶಿತ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ನಿಲಯದ ಸಿಬ್ಬಂದಿಗಳಾದ ದೀಪಕ್ ಹಾಗೂ ಉದಯಕುಮಾರ್ ಉಪಸ್ಥಿತರಿದ್ದರು. ಅಧ್ಯಾಪಕ ಉದಯರಾಜ್ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here