ಬೆಳ್ತಂಗಡಿ: ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ವತಿಯಿಂದ ಕೃಷಿ ಇಲಾಖೆ ಬೆಳ್ತಂಗಡಿ ಇವರ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿಯಲ್ಲಿ ಜೂ.4ರಂದು ಜರುಗಿತು.
ಕಾರ್ಯಕ್ರಮದಲ್ಲಿ ಪುತ್ತೂರು ಐ.ಸಿ. ಏ.ಆರ್ ಗೇರು ಸಂಶೋಧನಾ ಕೇಂದ್ರದ ಮುಖ್ಯಸ್ಥ ದಿನಕರ ಅಡಿಗ ಇವರು ಕಾರ್ಯಕ್ರಮದ ಕುರಿತು ಶುಭವನ್ನು ಹಾರೈಸಿ, ಗೇರು ಸಂಶೋಧನಾ ಕೇಂದ್ರದಲ್ಲಿ ರೈತರಿಗೆ ಲಭ್ಯವಿರುವ ಇತ್ತೀಚಿನ ಕೊಯ್ಲು ಹಾಗೂ ಕೊಯ್ಲಿನೋತ್ತರ ತಂತ್ರಜ್ಞಾನಗಳ ಕುರಿತು ವಿವರಿಸಿದರು. ಇನ್ನೋರ್ವ ವಿಜ್ಞಾನಿ ಡಾ. ಭಾಗ್ಯ ಇವರು ರೈತರಿಗೆ ಸಂಶೋಧನಾ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಿದರು.

ಕೃಷಿ ವಿಜ್ಞಾನ ಕೇಂದ್ರ ಮಂಗಳೂರಿನ ತೋಟಗಾರಿಗೆ ವಿಜ್ಞಾನಿ ಡಾ. ರಶ್ಮಿ ಇವರು ಅಡಿಕೆ, ತೆಂಗು ಹಾಗೂ ಪ್ರಮುಖ ತೋಟಗಾರಿಕೆ ಬೆಳೆಗಳ ಮುಂಗಾರು ಹಂಗಾಮಿನ ಸಮಗ್ರ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಇನ್ನೋರ್ವ ವಿಜ್ಞಾನಿ ಡಾ. ಹರೀಶ್ ಶೆಣೈ ಇವರು ಬತ್ತದ ತಳಿಗಳ ಬಗ್ಗೆ ವಿವರಿಸಿ ಬೀಜೋಪಚಾರದ ಮಹತ್ವವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು ಮತ್ತು ಸುರಕ್ಷಿತ ಪೀಡನಾಶಕಗಳ ಬಳಕೆ ಕುರಿತು ಮಾಹಿತಿ ನೀಡಿದರು.
ಬೆಳ್ತಂಗಡಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಎ.ಡಿ. ಕೃಷಿ ಇಲಾಖೆ ಯೋಜನೆಗಳ ಬಗ್ಗೆ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಚಂದ್ರಶೇಖರ್ ಇವರು ತೋಟಗಾರಿಕೆ ಇಲಾಖೆ ಯೋಜನೆಗಳ ಬಗ್ಗೆ ಹಾಗೂ ಎಲೆ ಚುಕ್ಕಿ ರೋಗದ ನಿಯಂತ್ರಣದ ಬಗ್ಗೆ ತಿಳಿಸಿದರು. ಕೃಷಿ ಅಧಿಕಾರಿ ಗಣೇಶ್, ಆತ್ಮ ಸಿಬ್ಬಂದಿ ನವನೀತ, ಸಾಯಿನಾಥ, ಕೃಷಿ ಇಲಾಖೆ ಸಿಬ್ಬಂದಿಗಳು ಹಾಗೂ ತಾಲೂಕಿನ ವಿವಿಧ ಕೃಷಿ ಸಖಿಯರು, ಪ್ರಗತಿಪರ ಕೃಷಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.