ಉಜಿರೆ: ಬದನಾಜೆ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಜೂ. 3ರಂದು ಎಲ್.ಕೆ.ಜಿ ತರಗತಿಯ ಉದ್ಘಾಟನಾ ಸಮಾರಂಭ ನಡೆಯಿತು. ಉಜಿರೆ ಕನಸಿನ ಮನೆ ಲಕ್ಷ್ಮೀ ಗ್ರೂಪ್ ಬದುಕು ಕಟ್ಟುವ ಬನ್ನಿ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್ ಉದ್ಘಾಟಿಸಿ ಮಕ್ಕಳಿಗೆ ಕಲಿಕೆಯೊಂದಿಗೆ ಸಂಸ್ಕಾರವನ್ನು ನೀಡಿ, ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಸರ್ಕಾರಿ ಶಾಲೆಯ ಬಗ್ಗೆ ತಾತ್ಸಾರ ಮನೋಭಾವ ಹೊಂದದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂಬ ಕಿವಿ ಮಾತನ್ನು ಪೋಷಕರಿಗೆ ತಿಳಿಸಿದರು. ಅಂತೆಯೇ ತಾನು ಶಾಲೆಯ ಸಭಾಂಗಣಕ್ಕೆ ಇಂಟರ್ಲಾಕ್ ಮತ್ತು ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕೊಡೆಯನ್ನು ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ವಹಿಸಿ ಬದನಾಜೆ ಶಾಲೆಯು ಪ್ರತಿಸಲ ಬಂದಾಗಲೂ ಬದಲಾವಣೆ ಹೊಂದುತ್ತಾ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ಇಲ್ಲಿಯ ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘದಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಯ್ಯ ಗೌಡ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಮಗದಷ್ಟು ಹೆಚ್ಚಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ ಇಲಿಯಾಸ್ ಬಿ.ಎಂ., ಗುರುಪ್ರಸಾದ್ ಕೋಟ್ಯಾನ್, ನಾಗವೇಣಿ, ಯುವಕ ಮಂಡಲದ ಅಧ್ಯಕ್ಷ ಪೀತಾಂಬರ, ಯುವತಿ ಮಂಡಲದ ಅಧ್ಯಕ್ಷೆ ನವೀನ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಮುನಾ, ಎಸ್. ಡಿ. ಎಂ. ಸಿ ಅಧ್ಯಕ್ಷ ಅನಿಲ್ ಡಿಸೋಜಾ, ಉಪಾಧ್ಯಕ್ಷೆ ಬಬಿತಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಲಲಿತ ಕುಮಾರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಿರಂಜನ್ ಪ್ರಾಸ್ತಾವಿಕ ನುಡಿಯೊಂದಿಗೆ ಗೌರವಾರ್ಪಣೆ ಮಾಡಿದರು. ಸಹ ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಎಲ್.ಕೆ.ಜಿ ತರಗತಿ ಶಿಕ್ಷಕಿ ಅರುಣಾಕ್ಷಿ ಧನ್ಯವಾದ ಸಮರ್ಪಿಸಿದರು.