ಶಿಬಾಜೆ: ರಸ್ತೆಗೆ ಅಡ್ಡಲಾಗಿ ಸಣ್ಣ ಇಟ್ಟಿಗೆಯನ್ನು ಇಟ್ಟು ಅದಕ್ಕೆ ಗೋಣಿಚೀಲ ಹಾಕಿ ಎಚ್ಚರಿಕೆ ಫಲಕವಿಲ್ಲದೆ ರಸ್ತೆ ತಡೆ ಮಾಡಿದ ಪರಿಣಾಮ, ಶಿಬಾಜೆ ನಿವಾಸಿ ಆಟೋ ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ಜೂ.1ರಂದು ರಾತ್ರಿ ನಡೆದಿದೆ.
ಶಿಬಾಜೆಯ ಕುರುಂಬು ಎಂಬಲ್ಲಿ ಘಟನೆ ಸಂಭವಿಸಿದ್ದು, ಆರೋಪಿ ಧರ್ಣಪ್ಪ ಗೌಡ ಎಂಬಾತನು ರಸ್ತೆ ಮಧ್ಯೆ ಇಟ್ಟಿಗೆ ಹಾಕಿದ ಪರಿಣಾಮ, ಶಿಬಾಜೆ ಮೂಲದ ಆಟೋ ಚಾಲಕ ಅಭಿಲಾಷ್ ಅವರ ರಿಕ್ಷಾ ಪಲ್ಟಿಯಾಗಿ ತೀವ್ರ ಗಾಯಗೊಂಡಿದ್ದಾರೆ. ಜೂನ್ 1ರಂದು ರಾತ್ರಿ 8:49ರ ಸಮಯಕ್ಕೆ, ಅಭಿಲಾಷ್ ತಮ್ಮ ಆಟೋ ರಿಕ್ಷಾದಲ್ಲಿ ಶಿಬಾಜೆಯಿಂದ ಅರಸಿನಮಕ್ಕಿ ಕಡೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಭಿಲಾಷ್ ಚಲಾಯಿಸುತ್ತಿದ್ದ ರಸ್ತೆ ಮಧ್ಯದಲ್ಲಿ ಯಾವುದೇ ಕಾರಣವಿಲ್ಲದೇ ಇಟ್ಟಿಗೆ ಹಾಕಿ ಅದರ ಮೇಲೆ ಗೋಣಿಚೀಲವನ್ನು ಹಾಕಿದಿದ್ದರಿಂದ, ಇದನ್ನು ಗಮನಿಸದ ಅಭಿಲಾಷ್ ರಿಕ್ಷಾ ನೇರವಾಗಿ ಆ ಭಾಗಕ್ಕೆ ಅಪ್ಪಳಿಸಿ ನಿಯಂತ್ರಣ ತಪ್ಪಿ ಬಲ ಕಡೆ ಪಲ್ಟಿಯಾಗಿದೆ. ಇದರಿಂದಾಗಿ ಅವರ ಬಲಕಾಲಿನ ಮೊಣಕಾಲು, ಮಣಿಗಂಟು ತೀವ್ರ ರಕ್ತಗಾಯವಾಗಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ತಮ್ಮ ಅನೀಷ್ ಅವರ ಸಹಾಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ಸಂಬಂಧ ಅಭಿಲಾಷ್ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶಿಬಾಜೆಯ ಕುರುಂಬು ನಿವಾಸಿ ಧರ್ಣಪ್ಪ ಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.