ಮುಂಡಾಜೆ: ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇದರ ಆಶ್ರಯದಲ್ಲಿ ಊರ ದಾನಿಗಳ ಸಹಕಾರದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ ಇಲ್ಲಿನ ವೈ.ಸಿ.ಭವನದಲ್ಲಿ ಮೇ.31ರಂದು ಜರಗಿತು.
ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ ಸುಜಿತ್ ಭಿಡೆ ಶೈಕ್ಷಣಿಕ ನಿಧಿ ವಿತರಿಸಿ ಮಾತನಾಡಿ “ದೇಶದ ಪ್ರಗತಿ,ಸಮಾಜವನ್ನು ಮುಂದುವರಿಸಲು ಪ್ರತಿಭೆಗಳು ಅಗತ್ಯ.ಪ್ರತಿ ಉದ್ಯೋಗವು ಉತ್ಕೃಷ್ಟವು ಅಲ್ಲ,ನಿಕೃಷ್ಟವು ಅಲ್ಲ,ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಪ್ರೀತಿ ಮುಖ್ಯ.ಯಶಸ್ಸಿಗೆ ಹಾದಿ.ಜೀವನದಲ್ಲಿ ಸಂಸ್ಕಾರದ ಜತೆ ಶಿಸ್ತು ಮುಖ್ಯ” ಎಂದರು.

ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಮಾತನಾಡಿ ಶಿಕ್ಷಣ,ಕ್ರೀಡೆ,ಸಾಂಸ್ಕೃತಿಕ,ಜನಪದ ಕ್ಷೇತ್ರದೊಂದಿಗೆ ನಮ್ಮ ಸಂಸ್ಥೆ ಯುವಜನತೆಯನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ.ಹಲವಾರು ಎಲೆಮರೆಯಕಾಯಿಗಳು ಸಂಸ್ಥೆ ಮೂಲಕ ಬೆಳಕಿಗೆ ಬಂದಿರುವುದು ಹೆಮ್ಮೆಯ ವಿಚಾರ.ವಿದ್ಯಾರ್ಥಿಗಳಿಗೆ ಇಂದು ಸಾಕಷ್ಟುಅವಕಾಶಗಳಿವೆ,ಇವುಗಳನ್ನು ಆಯ್ಕೆ ಮಾಡಿ ಮುಂದುವರಿಯುವುದು ಮುಖ್ಯ” ಎಂದರು.
ಉದ್ಯಮಿಗಳಾದ ಜಯಪ್ರಕಾಶ್ ಶೆಟ್ಟಿ ಮುಂಬೈ, ಶಮಂತ ಕುಮಾರ್ ಜೈನ್, ಸ್ವಾತಿ ನವೀನ್, ಮುಂಡಾಜೆ ಸಿಎ ಬ್ಯಾಂಕ್ ನಿರ್ದೇಶಕಿ ಅಶ್ವಿನಿ ಎ. ಹೆಬ್ಬಾರ್, ಉಪನ್ಯಾಸಕ ಸಚಿನ್ ಹೆಬ್ಬಾರ್, ಶಿಕ್ಷಕಿ ಜತೀಕ್ಷಾ ಮತ್ತಿತರರು ಉಪಸ್ಥಿತರಿದ್ದರು. ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಶಿಧರ ಠೋಸರ್ ಸ್ವಾಗತಿಸಿದರು.