ಶಿಕ್ಷಣ ಪಡೆಯುವ ಹಂಬಲಕ್ಕೆ ಸಹಕಾರ ನೀಡಿದ ಶೌರ್ಯ ವಿಪತ್ತು ತಂಡ

0

ಬೆಳ್ತಂಗಡಿ: ತಾಲೂಕಿನ ಅರಸಿನಮಕ್ಕಿ ಪಂಚಾಯತ್ ವ್ಯಾಪ್ತಿಯ ರೆಖ್ಯ ಗ್ರಾಮದ ಪೆರ್ಗಡೆಮಾರ್ ಎಂಬಲ್ಲಿ ಮೋನಪ್ಪ ಗೌಡ ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ತಮ್ಮೆಲ್ಲ ಕಷ್ಟಗಳನ್ನು ನುಂಗಿ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕೆಂಬ ಹಂಬಲ ಅವರದ್ದು. ಅದರಂತೆ ಮಕ್ಕಳೂ ಚೆನ್ನಾಗಿ ಕಲಿಯುತ್ತಿದ್ದರು. ನೇಲ್ಯಡ್ಕ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಮಗಳು ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಮಗ ದ್ವಿತೀಯ ಪಿಯುಸಿ ಕಲಿಯುತ್ತಿರುವಾಗ ವಿಧಿಯಾಟಕ್ಕೆ ಕುಟುಂಬ ಬಲಿಯಾಯಿತು.

ಮೊದಲಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೋನಪ್ಪಗೌಡರ ಪತ್ನಿ ಮಗಳ ಹತ್ತನೇ ತರಗತಿ ಪರೀಕ್ಷಾ ಸಮಯದಲ್ಲಿ ತೀವ್ರ ಅಸ್ವಸ್ಥರಾಗಿ ತೀರಿಕೊಂಡರೆ ಮೋನಪ್ಪಗೌಡರು ಹದಿನೈದು ದಿನಗಳ ಅಂತರದಲ್ಲಿ ಇಹಲೋಕ ತ್ಯಜಿಸಿದರು. ಈ ದುಖದ ನಡುವೆಯೇ ಪರೀಕ್ಷೆ ಎದುರಿಸಿದ ಇಬ್ಬರು ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರೂ ಮುಂದಿನ ಶಿಕ್ಷಣದ ಚಿಂತೆ ಅವರುಗಳ ಮುಂದೆ ಬೃಹದಾಕಾರವಾಗಿ ನಿಂತಿತ್ತು.

ಆಗ ಅವರ ಮನಸ್ಸಿಗೆ ಹೊಳೆದ ಹೆಸರೇ ಶೌರ್ಯ ಸ್ಥಳೀಯ ಪರಿಸರದಲ್ಲಿ ಕಳೆದ ಐದು ವರುಷಗಳಿಂದ ವಿಪತ್ತು ನಿರ್ವಹಣೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುವ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ತಂಡ ಇದುವರೆಗೂ ಯಾರಿಗೂ ಧನಸಹಾಯ ಮಾಡಿದ್ದಿಲ್ಲ. ಕಾರಣ ಇಷ್ಟೇ ತಂಡದಲ್ಲಿ ಆರ್ಥಿಕವಾಗಿ ಬಲಿಷ್ಠವಾದ ಸದಸ್ಯರು ಯಾರೂ ಇಲ್ಲ. ಆದರೆ ತಂಡದ ಸ್ಥಳೀಯ ಸದಸ್ಯ ಚೇತನ್ ರೆಖ್ಯ ಈ ವಿಷಯ ಪ್ರಸ್ತಾಪಿಸಿದಾಗ ಮಕ್ಕಳಿಬ್ಬರು ಶಿಕ್ಷಣ ವಂಚಿತರಾಗಬಾರದು, ನಮ್ಮ ಕೈಯಲ್ಲಿ ಇಲ್ಲದಿದ್ದರೆ ಶಿಕ್ಷಣಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಸಂಸ್ಥೆಗಳನ್ನು ವಿನಂತಿಸುವ ಎಂಬುದಾಗಿ ತಂಡದಲ್ಲಿ ಚರ್ಚಿಸಿ ಸದಾ ತಂಡದ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಕಂಡು ಬೆನ್ನು ತಟ್ಟುವ ಸಹ್ಯಾದ್ರಿ ಸಂಚಯ ಟ್ರಸ್ಟ್ ಇವರಿಗೆ ವಿನಂತಿಸಿಕೊಂಡರು.

ಟ್ರಸ್ಟ್ ನ ಕಾರ್ಯದರ್ಶಿ ದಿನೇಶ್ ಹೊಳ್ಳ ಅವರು ಮಕ್ಕಳ ಮನೆಗೆ ಬಂದು ಹುಡುಗನ ಶಿಕ್ಷಣಕ್ಕಾಗಿ ಕಾಲೇಜು ಶುಲ್ಕದ ಮೊತ್ತದ ಚೆಕ್ ವಿತರಿಸಿದರೆ, ಮಗಳ ಶಿಕ್ಷಣದ ಕಾಲೇಜು ಶುಲ್ಕದ ಮೊತ್ತವನ್ನು ಸ್ವಯಂಸೇವಕರು ಹಂಚಿಕೊಂಡು ಆಕೆಗೆ ನೀಡಲು ಯೋಚಿಸುತ್ತಿದ್ದಾರೆ. ಈ ಕಾರ್ಯದಲ್ಲಿ ವಿಶೇಷವಾಗಿ ಉಜಿರೆ ಘಟಕದ ಸಚಿನ್ ಭಿಡೆ ತೊಡಗಿಸಿಕೊಂಡಿದ್ದು ವಿಶೇಷ. -ವರದಿ: ರಮೇಶ್ ಬೈರಕಟ್ಟ

LEAVE A REPLY

Please enter your comment!
Please enter your name here