ಕೊಕ್ಕಡ: ಭಾರತೀಯ ಸೇನೆಯು ಇತ್ತೀಚೆಗೆ ಯಶಸ್ವಿಯಾಗಿ ನಡೆಸಿದ ‘ಆಪರೇಷನ್ ಸಿಂದೂರು’ ಕಾರ್ಯಾಚರಣೆಯ ಯಶಸ್ಸಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ, ಸೌತಡ್ಕ ಶ್ರೀ ಕ್ಷೇತ್ರ ಮಹಾ ಗಣಪತಿ ದೇವಸ್ಥಾನದಲ್ಲಿ ಮೇ.9ರಂದು ವಿಶೇಷ ರಂಗಪೂಜೆಯನ್ನು ನೆರವೇರಿಸಲಾಯಿತು.
ಬೆಳಗ್ಗೆ ದೇವಾಲಯದ ಅರ್ಚಕ ಸುಬ್ರಹ್ಮಣ್ಯ ತೋಡ್ತಿಲ್ಲಾಯ ನೇತೃತ್ವದಲ್ಲಿ ಮಹಾಗಣಪತಿ ದೇವರಿಗೆ ಶೋಧಸೋಪಚಾರ ಪಾದಪೂಜೆ, ಅಲಂಕಾರ, ನೈವೇದ್ಯ ಹಾಗೂ ರಂಗಪೂಜೆಯೊಂದಿಗೆ ವಿಶೇಷ ಆರಾಧನೆ ನಡೆಯಿತು. ಈ ವೇಳೆ ದೇಶದ ಭದ್ರತೆಗೆ ನಿಂತಿರುವ ಭಾರತೀಯ ಯೋಧರಿಗೆ ದೇವರು ಶಕ್ತಿ, ಸಾಮರ್ಥ್ಯ ಹಾಗೂ ಆತ್ಮಬಲ ನೀಡಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಜೊತೆಗೆ, ಯೋಧರ ಕುಟುಂಬಗಳು ಕ್ಷೇಮ, ಸುಖ, ಸಮೃದ್ಧಿಯಲ್ಲಿ ಇರಲೆಂದು ಆಶಿಸಿ ಪೂಜೆ ನೆರವೇರಿಸಲಾಯಿತು.
ಈ ಧಾರ್ಮಿಕ ಸೇವೆಯಲ್ಲಿ ದೇವಸ್ಥಾನದ ವ್ಯವಸ್ಥಾಪಕ ರಾಮಕೃಷ್ಣ ಎಡಪಡಿತ್ತಾಯ, ಅರ್ಚಕರು, ದೇವಸ್ಥಾನದ ಸಿಬ್ಬಂದಿ ವರ್ಗದವರು ಮತ್ತು ಹಲವಾರು ಭಕ್ತಾದಿಗಳು ಭಾಗವಹಿಸಿದ್ದರು.