

ಬೆಳ್ತಂಗಡಿ: ಪುದುವೆಟ್ಟುವಿನಲ್ಲಿ ಅಕ್ರಮವಾಗಿ ನದಿಯಿಂದ ಮರಳು ತೆಗೆದು ಸಾಗಾಟ ಮಾಡುತ್ತಿದ್ದ ಪ್ರಕರಣದವೊಂದನ್ನು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿದ್ದು ಮರಳು ಸಮೇತ ಲಾರಿಯನ್ನು ಏ.16ರಂದು ಸಂಜೆ ವಶಪಡಿಸಿಕೊಂಡಿದ್ದಾರೆ.
ಮರಳು ಸಾಗಾಟದ ಸಂಧರ್ಭದಲ್ಲಿ ಕುಟುಂಬದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕೆ ಧರ್ಮಸ್ಥಳ ಪಿ.ಎಸ್.ಐ ಸಮರ್ಥ್ ಅವರು ಹಾಗೂ ತಂಡ ಖಚಿತ ಮಾಹಿತಿಯ ಮೇರೆಗೆ ಪುದುವೆಟ್ಟು ಗ್ರಾಮದ ಬೊಳ್ಮನಾರು ಎಂಬಲ್ಲಿ ಅಕ್ರಮವಾಗಿ ಮರಳನ್ನು ತುಂಬಿ ಸಾಗಾಟ ಮಾಡುತ್ತಿದ್ದ ಕೆ.ಎ.17ಸಿ 2338 ನಂಬರಿನ ಈಚರ್ ಲಾರಿಯನ್ನು ಪತ್ತೆ ಹಚ್ಚಿದ್ದಾರೆ.
ಯಾವುದೇ ದಾಖಲೆಗಳಿಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಪ್ರಕರಣ ದಾಖಲಿಸಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 5,05,000 ಎಂದು ಅಂದಾಜಿಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ನಿಯಂತ್ರಣಕ್ಕೆ ಬಂದಿದ್ದ ಅಕ್ರಮ ಮರಳು ಗಣಿಗಾರಿಕೆಯ ದಂಧೆ ಇದೀಗ ಕಲ್ಮಂಜ, ಬೆಳಾಲು, ಧರ್ಮಸ್ಥಳ ಈ ಎಲ್ಲಾ ಗ್ರಾಮಗಳಲ್ಲಿ ಮತ್ತೆ ಆರಂಭಗೊಂಡಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಇದರ ನಡುವೆಯೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು ಪ್ರಕರಣ ದಾಖಲಿಸಲಾರಂಭಿಸಿದ್ದಾರೆ.