ಗೆಳೆಯರ ಬಳಗದ ಶ್ರಮದಾನ: ಹದಗೆಟ್ಟ ಗ್ರಾಮೀಣ ರಸ್ತೆ ದುರಸ್ತಿ

0

ಬೆಳ್ತಂಗಡಿ: ಮೂರ್ಜೆಯಿಂದ ಕೊಳಕ್ಕೆಬೈಲ್ ಮೂಲಕ ನೈನಾಡಿಗೆ ಸಂಪರ್ಕ ಕಲ್ಪಿಸುವ ಹದಗೆಟ್ಟ ಗ್ರಾಮೀಣ ರಸ್ತೆ, ಡಾಂಬರು ಕಿತ್ತುಹೋಗಿ, ಸಂಚಾರಕ್ಕೆ ಸಂಪೂರ್ಣ ಯೋಗ್ಯವಲ್ಲದ ಸ್ಥಿತಿಗೆ ತಲುಪಿತ್ತು. ಈ ರಸ್ತೆಯನ್ನು ದಿನನಿತ್ಯ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಸ್ಥಳೀಯರು ಬಳಸುತ್ತಿದ್ದರು.ಹದಗೆಟ್ಟಿದ್ದ ಈ ರಸ್ತೆಯ ದುರಸ್ತಿಯ ಯಾವ ಲಕ್ಷಣಗಳು ಕಾಣದಿದ್ದಾಗ ಸ್ಥಳೀಯರಲ್ಲಿ ಜನಾನುರಾಗಿ ಕೆಲಸ ಮಾಡುತ್ತಿರುವ ಗೆಳೆಯರ ಬಳಗ ಸೇವಾ ಸಂಸ್ಥೆ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಯಿತು. ಅ.6ರಂದು ಗೆಳೆಯರ ಬಳಗದ ಯುವಕರು ಹಾಗೂ ಸ್ಥಳೀಯ ದಾನಿಗಳು ಸೇರಿಕೊಂಡು, ಶ್ರಮದಾನ ಮೂಲಕ ಸುಮಾರು 4.5 ಕಿಲೋಮೀಟರ್ ದೂರದ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಿದರು.

ಈ ಕಾರ್ಯದಲ್ಲಿ ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ಬಳಸಿಕೊಂಡು ಗುಂಡಿಬಿದ್ದ ಭಾಗಗಳಿಗೆ ಹೊಸ ಕಾಂಕ್ರೀಟ್ ಹಾಕಿ ದುರಸ್ತಿ ಮಾಡಲಾಯಿತು. ಜೊತೆಗೆ, ಜೆಸಿಬಿ ಯಂತ್ರದ ಸಹಾಯದಿಂದ ಚರಂಡಿಗಳನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಲಾಯಿತು.

ಈ ಶ್ರಮದಾನದಲ್ಲಿ ಗೆಳೆಯರ ಬಳಗದ ಸಂಚಾಲಕ ಎಲಿಯಾಸ್ ಕ್ರಾಸ್ತಾ, ಅಧ್ಯಕ್ಷ ಡೋನ್ ಪ್ರವೀಣ್ ಕ್ರಾಸ್ತಾ, ಕಾರ್ಯದರ್ಶಿ ಅನಿಲ್ ಮೊರಾಸ್, ಗ್ರಾಮ ಪಂಚಾಯತ್ ಸದಸ್ಯ ಹಾಗು ಗೆಳೆಯರ ಬಳಗದ ಗೌರವಾಧ್ಯಕ್ಷ ನೆಲ್ವಿಸ್ಟರ್ ಪಿಂಟೋ, ಹಾಗೆಯೇ ನಿರ್ದೇಶಕರಾಗಿದ್ದಂತಹ ವಸಂತ ಪೂಜಾರಿ, ಲೋಕೇಶ್ ಪೂಜಾರಿ, ಸಂತೋಷ್ ಫೆರ್ನಾಂಡಿಸ್, ವಿಘ್ನೇಶ್ ಪೂಜಾರಿ, ಮಧುಕರ ಶೆಟ್ಟಿ, ಜೋಯೆಲ್ ಲೋಬೊ, ಅರುಣ್ ಫೆರ್ನಾಂಡಿಸ್, ವಿನ್ಸೆಂಟ್ ಗಲ್ಬವೋ, ಎಮರ್ಸನ್ ಕ್ರಾಸ್ತಾ ಹಾಗೂ ಗೆಳೆಯರ ಬಳಗದ ಇತರ ಸದಸ್ಯರು ಮತ್ತು ಸ್ಥಳೀಯರು ಈ ಶ್ರಮದಾನದಲ್ಲಿ ಭಾಗವಹಿಸಿದ್ದರು.

ಅದೇ ರೀತಿ ತೀರ ಹದಕೆಟ್ಟ ದೈಕಿನಕಟ್ಟೆ ಇಂದ ಮಂಚಗುಡ್ಡೆ ವರೆಗಿನ ದೊಡ್ಡ ಹೊಂಡಗಳನ್ನು ಮುಚ್ಚಿ ಅದೆಕ್ಕೆ ಕಾಂಕ್ರೀಟ್ ಹಾಕಲಾಗಿದೆ. ಡೆಬಿಥಲ್ ಎಂಬಲ್ಲಿ ವಾಹನ ಸಂಚಾರಕ್ಕೆ ಕಷ್ಟವಾಗುವ ಸ್ಥಳದಲ್ಲಿ ಕೊಂಕ್ರಿಟ್ ಹಾಕಲಾಗಿದೆ. ಈ ಶ್ರಮದಾನದ ಒಟ್ಟು ಖರ್ಚು 115000 ವಾಗಿದ್ದು ಊರ ನಾಗರಿಕರಿಂದ ಒಟ್ಟು 90000 ಕಲೆಕ್ಷನ್ ಮಾಡಿ ಉಳಿದ ಮೊತ್ತ ವನ್ನು ಗೆಳೆಯರ ಬಳಗ ಸೇವಾ ಸಂಸ್ಥೆಯು ಭರಿಸುತ್ತದೆ.

ಆನಂದ ತೀರ್ಥ ಭಟ್, ಸ್ಥಳೀಯ ಉದ್ಯಮಿ, ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಊಟದ ವ್ಯವಸ್ಥೆಯನ್ನು ಮಾಡಿದರು. ಶ್ರಮದಾನದ ಮೂಲಕ ಗೆಳೆಯರ ಬಳಗದ ಯುವಕರು “ಮನಸಿದ್ದರೆ ಯಾವುದೂ ಅಸಾಧ್ಯವಲ್ಲ” ಎಂಬ ಮಾತನ್ನು ಮಾಡಿ ತೋರಿಸಿದರು.

LEAVE A REPLY

Please enter your comment!
Please enter your name here