ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ, ಧಾರವಾಡ ಇದರ ಸಹಯೋಗದಲ್ಲಿ ಅ.4 ಮತ್ತು 5ರಂದು ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರಕ್ಕೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ದೀಪ ಬೆಳಗಿಸಿ ಉದ್ಗಾಟಿಸಿದರು.

ಬಳಿಕ ಮಾತನಾಡಿದ ಅವರು- ಮಾನವ ಶರೀರ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಪಂಚೇಂದ್ರಿಯಗಳೇ ಮೂಲ ಸಾಧನ. ಎಲ್ಲಾ ಅಂಗಗಳ ಬಗ್ಗೆ ಅತೀ ಕಾಳಜಿ ಹೊಂದಿರುವ ಮಾನವ ಕಿವಿಗಳ ಬಗ್ಗೆ ನಿರ್ಲಕ್ಷ ತೋರಿಸುತ್ತಾನೆ. ಪಂಚೇಂದ್ರಿಯಗಳಲ್ಲಿ ಒಂದಕ್ಕೆ ಲೋಪವಾದರೂ ಇತರ ಇಂದ್ರಿಯಗಳ ಮೇಲೆ ಪರಿಣಾಮ ಬೀರಬಲ್ಲದು. ಆದ್ದರಿಂದ ಶ್ರವಣದೋಷದ ಬಗ್ಗೆ ನಿರ್ಲಕ್ಷ ಬೇಡ. ಉಜಿರೆ ಎಸ್.ಡಿ.ಎಂ ಆಸ್ಪತ್ರೆ ಗ್ರಾಮೀಣ ಭಾಗದಲ್ಲಿದ್ದು, ನಗರದ ಹೈಟೆಕ್ ಆಸ್ಪತ್ರೆಗಳಂತೆ ಅತ್ಯಾಧುನಿಕ ವೈದ್ಯಕೀಯ ಸೇವೆ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಮಿತದರದಲ್ಲಿ ನಡೆಸುತ್ತಿದೆ. ಆಸ್ಪತ್ರೆಯ ಬಗ್ಗೆ ಜನ ಒಳ್ಳೆಯ ಅಭಿಪ್ರಾಯ ಹೊಂದಿರುವುದು ಸ್ಥಳಿಯರಾದ ನಮಗೆ ಖುಷಿ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಆಸ್ಪತ್ರೆಯಲ್ಲಿ ಸುಸಜ್ಜಿತ ಶ್ರವಣ ಮತ್ತು ಮಾತು ಪರಿಶೀಲನಾ ಸೆಂಟರ್ ತೆರೆದು ಇನ್ನಷ್ಟು ಸೇವೆ ನೀಡುವಂತಾಗಲಿ ಎಂದರು.

ಧಾರವಾಡದ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ವಾಕ್ ಮತ್ತು ಶ್ರವಣ ತಜ್ಞರಾದ ಡಾ| ವಸೀಮ್ ಮಾತನಾಡಿ- ವಿಶ್ವದಲ್ಲಿ 190 ಕೋಟಿ ಮಂದಿ ಶ್ರವಣ ದೋಷ ಹೊಂದಿದ್ದಾರೆ. ಇದರಲ್ಲಿ 7 ಶೇಕಡಾ ಮಂದಿ ಭಾರತದಲ್ಲಿಯೇ ಇದ್ದಾರೆ. ಅತಿಯಾದ ಹೆಡ್‌ಪೋನ್ ಬಳಕೆ ಮತ್ತು ಡಿಜೆ ಸೌಂಡ್ ಶ್ರವಣದೋಷಕ್ಕೆ ಕಾರಣವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸರ್ವೆ ಪ್ರಕಾರ ಮುಂದಿನ ದಿನಗಳಲ್ಲಿ 10 ರಲ್ಲಿ 4 ಮಂದಿ ಶ್ರವಣ ದೋಷ ಸಮಸ್ಯೆ ಎದುರಿಸಲಿದ್ದಾರೆ. ಶ್ರವಣದೋಷ ನಿವಾರಣೆ ಕ್ಲಿಷ್ಟಕರವಾದದ್ದು. ಕೇಳುವ ಸಾಮರ್ಥ್ಯ ಎಷ್ಟು ಮತ್ತು ಯಾವುದು ಹಿತ ಎಂಬುದನ್ನು ಅರಿತು ಚಿಕಿತ್ಸೆ ನೀಡಬೇಕಾಗುತ್ತದೆ ಎಂದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತಾ, ಉಜಿರೆಯಲ್ಲಿ ಪ್ರಥಮ ಬಾರಿಗೆ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ ನಡೆಯುತ್ತಿದೆ. ಶ್ರವಣ ಮತ್ತು ಮಾತು ಪರಿಶೀಲನಾ ಚಿಕಿತ್ಸೆ ಅತೀ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿನ ಜನ ದೂರದ ಊರಿಗೆ ಹೋಗಿ ಇಂತಹ ಚಿಕಿತ್ಸೆ ಪಡೆಯುವುದು ಕಷ್ಟ. ಇದೇ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ೨ ದಿನದ ಉಚಿತ ಶಿಬಿರದಲ್ಲಿ ಉಜಿರೆ ಎಸ್.ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್, ಧಾರವಾಡದ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ವಾಕ್ ಮತ್ತು ಶ್ರವಣ ತಜ್ಞರಾದ ಡಾ| ವಸೀಮ್ ಮತ್ತು ೮ ಮಂದಿಯ ತಂಡದವರು ಎಲ್ಲಾ ವಯಸ್ಸಿನ ಜನರಿಗೆ ಮಾತು, ಭಾಷೆ ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಿ, ಭಾರತ ಸರಕಾರದ ಎ.ಡಿ.ಐ.ಪಿ ಯೋಜನೆಯಡಿ ಶ್ರವಣ ಉಪಕರಣಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳ ಕುರಿತು ಮಾರ್ಗದರ್ಶನ ನೀಡಲಾಗುವುದು ಎಂದರು.

ಮಮತಾ, ಜಯಶ್ರೀ, ಅಕ್ಷತಾ ಮತ್ತು ನಿಶಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಉದ್ಘಾಟನಾ ಸಮಾರಂಭದಲ್ಲಿ ಸೃಜನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್, ಪಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here