ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಗಂಡಿಬಾಗಿಲು: ಸಿಯೋನ್ ಆಶ್ರಮ ಟ್ರಸ್ಟ್, ಇಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆ.15ರಂದು ಆಚರಿಸಲಾಯಿತು.ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟೀಯವರಾದ ಡಾ.ಯು.ಸಿ.ಪೌಲೋಸ್‌ರವರು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.ಸಭಾ ಕಾರ್ಯಕ್ರಮವು ರಜನಿದೇವಿ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

ಸಭೆಯ ಅಧ್ಯಕ್ಷಸ್ಥಾನವನ್ನಲಂಕರಿಸಿದ್ದ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯವರಾದ ಡಾ.ಯು.ಸಿ.ಪೌಲೋಸ್‌ರವರು ಸ್ವಾತಂತ್ರ್ಯೋತ್ಸವ ಆಚರಣೆಯ ಮಹತ್ವದ ಬಗ್ಗೆ ವಿವರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ – ಬಲಿದಾನವನ್ನು ಸ್ಮರಿಸಬೇಕು. ಅವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶಪ್ರೇಮ ಮೆರೆಯಬೇಕು. ಎಲ್ಲಾ ಧರ್ಮಿಯರ ಆಚಾರ-ವಿಚಾರಗಳಿಗೆ ಸಮಾನ ಗೌರವವಿದೆ. ಬದುಕಿಗೆ ಮಾರ್ಗದರ್ಶನ ನೀಡುವ ಹಿರಿಯರನ್ನು ಗೌರವಿಸುವ ಜತೆಗೆ ದೇಶ ನನ್ನದೆನ್ನುವ ಭಾವನೆ ಜಾಗೃತವಾಗಬೇಕು. ಪರಸ್ಪರ ಪ್ರೀತಿ, ನಂಬಿಕೆಯಿಂದ ಒಗ್ಗಟ್ಟಿನಿಂದ ಬಾಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ವೇದಿಕೆಯನ್ನಲಂಕರಿಸಿದ್ದ ಪೆರುವಾಯಿ ಚರ್ಚ್‌ನ ಧರ್ಮಗುರುಗಳಾದ ರೆ.ಫಾ.ಸೈಮನ್‌ರವರು ನಾವೆಲ್ಲರೂ ಒಗ್ಗಟ್ಟಿನಿಂದ ನಡೆದರೆ ನಮ್ಮ ದೇಶದ ಮುನ್ನಡೆ ಸಾಧ್ಯ ಎಂದರು. ಅನಾಥರ, ದೀನರ ದು:ಖಿತರ ಬದುಕಿಗೆ ಆಶ್ರಯ ನೀಡುವ ಸಿಯೋನ್ ಆಶ್ರಮದ ಸೇವೆ ಅನನ್ಯವಾದುದು ಎಂದರು. ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಮೇರಿ ಯು.ಪಿ.ಯವರು, ಉಜಿರೆ ರಾಜಾರಾಂ ಟೆಕ್ಸ್‌ಟೈಲ್ಸ್‌ನ ಮಾಲಕರಾದ ಸುಕರಾಂ ಪಟೇಲ್‌ರವರು, ಹಿತೈಷಿಗಳಾದ ಜೋಸೆಫ್ ಪಿ.ಪಿ. ಗಂಡಿಬಾಗಿಲು, ಆಶ್ರಮನಿವಾಸಿಗಳಾದ ಕುಸುಮ ಪೂಜಾರಿ ಮತ್ತು ಪಲಣಿಯವರು ಉಪಸ್ಥಿತರಿದ್ದರು.

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮರಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಿಯೋನ್ ಆಶ್ರಮದ ಎಲ್ಲಾ ಟ್ರಸ್ಟೀ ಸದಸ್ಯರುಗಳು, ಆಡಳಿತ ಮಂಡಳಿಯವರು, ಟ್ರಸ್ಟೀ ಕುಟುಂಬಸ್ಥರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು. ಸಮಾಜಸೇವಕಿ ಸಿಂಧು ವಿ.ಎಮ್.ರವರು ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಭೋಜನವನ್ನು ಕೆವಿನ್ ಡಿ’ಸೋಜ ಮತ್ತು ಸುನಿಲ್ ತೋರಸ್ ಹಾಗೂ ಗೆಳೆಯರ ಬಳಗ ಕಲ್ಲಡ್ಕ ಇವರು ನೀಡಿದರು. ಸಿಹಿತಿಂಡಿಯನ್ನು ರಾಜಾರಾಂ ಟೆಕ್ಸ್‌ಟೈಲ್ಸ್, ನೆರಿಯ ಗ್ರಾಮ ಪಂಚಾಯತ್ ಮತ್ತು ಸಿಯೋನ್ ಆಶ್ರಮದ ವತಿಯಿಂದ ವಿತರಿಸಲಾಯಿತು.

ವಿನ್ಸೆಂಟ್ ಡಿ ಪೌಲ್ ಸೊಸೈಟಿ, ಅವರ್ ಲೇಡಿ ಆಫ್ ಫಾತಿಮಾ ಚರ್ಚ್ ಪೆರುವಾಯಿ ಇದರ ಅಧ್ಯಕ್ಷರು ಮತ್ತು ಸದಸ್ಯರುಗಳು ಆಶ್ರಮ ನಿವಾಸಿಗಳ ಊಟೋಪಚಾರಕ್ಕಾಗಿ ದಿನಸಿ ಸಾಮಾಗ್ರಿಗಳನ್ನು ನೀಡಿದರು.

LEAVE A REPLY

Please enter your comment!
Please enter your name here