ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

0

ಗುರುವಾಯನಕೆರೆ: ವಿದ್ಯಾಸಾಗರ ಕ್ಯಾಂಪಸ್ ಇಲ್ಲಿನ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ 2024-25ನೇ ಸಾಲಿನಲ್ಲಿ ದಾಖಲಾತಿ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ. ವಿಜಯ ಪ್ರಸಾದ ಉದ್ಘಾಟಿಸಿದರು. ಬಳಿಕ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಡುವ ಪರಿಶ್ರಮವೇ ಅತ್ಯಂತ ದೊಡ್ಡ ತಪಸ್ಸು. ಹಾಸ್ಟೆಲ್ ಜೀವನದಲ್ಲಿ ಸಿಗುವ ಕಲಿಕೆ ನಮ್ಮ ಸುಭದ್ರ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿಕೊಳ್ಳುವುದು. ಇದರೊಂದಿಗೆ ವಿದ್ಯಾರ್ಥಿಯು ಮುಂಬರುವ ತನ್ನ ಸಾರ್ವಜನಿಕ ಜೀವನದಲ್ಲಿ ದುಶ್ಚಟಗಳಿಂದ, ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ದೂರವಿದ್ದು, ಅತ್ಯಂತ ಜಾಗರೂಕತೆಯಿಂದ ಬಳಸುವಂತೆ ಜಾಗೃತಿ ಮೂಡಿಸಿದರು. ತನ್ನ ವೃತ್ತಿ ಜೀವನದ ಅನುಭವದ ನೆಲೆಯಲ್ಲಿ ಮಾತನಾಡಿದ ಅವರು ಬದುಕಿನಲ್ಲಿ ಎದುರಾದ ಕೆಲವು ಘಟನೆಗಳನ್ನು ಸ್ಮರಿಸಿಕೊಂಡು ಆ ಮೂಲಕ ವಿದ್ಯಾರ್ಥಿಗಳಿಗೆ ಸಾಧನೆಯ ಜೊತೆಗೆ ಎಚ್ಚರದ ಬದುಕನ್ನು ಬದುಕುವ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು.

ತದನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಧರ್ಮಸ್ಥಳದ ಕಲಾ ಪೋಷಕ ಭುಜಬಲಿ ಅವರು ಕಲಿಕೆಯೊಂದಿಗೆ ಸಾಂಸ್ಕೃತಿಕ ಕಲಾ ಪ್ರಾಶಸ್ತ್ಯವನ್ನು ಮಕ್ಕಳಿಗೆ ನೀಡುತ್ತಿರುವುದನ್ನು ಅಭಿನಂದಿಸಿದರು. ವಿದ್ಯಾರ್ಥಿ ಜೀವನದಲ್ಲಿ ಪಡುವ ಪರಿಶ್ರಮವು ನಮ್ಮನ್ನು ಯಶಸ್ಸಿನ ಮೆಟ್ಟಿಲೇರುವಂತೆ ಮಾಡುವುದು ಎಂದರು. ಜೀವನ ಮೌಲ್ಯವನ್ನು ಮೈಗೂಡಿಸುವುದರೊಂದಿಗೆ ಉತ್ತಮ ಸಮಾಜವನ್ನು ಕಟ್ಟುವ ನಿರ್ಧಾರವನ್ನು ಕೈಗೊಳ್ಳಿ ಎಂದು ಕರೆಕೊಟ್ಟರು.

ಬಳಿಕ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು, ತಂದೆ ತಾಯಿಯ ಆಶೀರ್ವಾದವೇ ಪ್ರತಿಯೊಬ್ಬ ವಿದ್ಯಾರ್ಥಿಯ ಏಳಿಗೆಗೆ ಕಾರಣವಾಗುವುದು. ಪ್ರತಿ ದಿನವೂ ಬೆಳಗ್ಗೆ ತಂದೆ ತಾಯಿಯ ಪಾದಕಮಲಗಳನ್ನು ಸ್ಮರಿಸಿಕೊಳ್ಳುವುದನ್ನು ಮರೆಯದಿರಿ. ಹಾಸ್ಟಲ್ ಜೀವನವು ಬದುಕಿನ ಬೇರೆ ಬೇರೆ ಆಯಾಮಗಳನ್ನು ಪರಿಚಯಿಸುತ್ತದೆ. ನಾಯಕತ್ವ, ಯೋಜನೆ, ವಿಚಾರ ವಿನಿಮಯ ಹೀಗೆ ಹಲವಾರು ಗುಣಗಳ ವರ್ಧನೆಗೆ ವಸತಿ ನಿಲಯಗಳ ನಿಯಮವು ಕಾರಣವಾಗುತ್ತದೆ ಎನ್ನುತ್ತಾ ತಮ್ಮ ವಿದ್ಯಾರ್ಥಿ ಜೀವನದ ಹಾಸ್ಟೆಲ್ ಅನುಭವವನ್ನು ತಿಳಿಸಿದರು.

ತದನಂತರ ಕಾಲೇಜಿನ ವಿವಿಧ ಪ್ರಾಧ್ಯಾಪಕರಿಂದ ಜೆ.ಇ.ಇ, ನೀಟ್, ಸಿಇಟಿ, ನಾಟ, ಎನ್.ಡಿ.ಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು.ಎಸ್.ಎನ್. ಭಟ್ ಸೈಪಂಗಲ್ ಹಾಗೂ ಸ್ಮಿತೇಶ್ ಬಾರ್ಯ ಇವರಿಂದ ವಿಶೇಷ ಕಾರ್ಯಗಾರ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಬಂಟ್ವಾಳದ ಡಾನ್ಸ್ ಕ್ರೀವ್ಸ್ ತಂಡದಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಇವರು ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲ ಅಧಿಕಾರಿ ದುರ್ಗಾಪರಮೇಶ್ವರ ಭಟ್ ಇವರು ನಿರೂಪಿಸಿದರು. ಭೌತಶಾಸ್ತ್ರ ಅಧ್ಯಾಪಕಿ ದಿವ್ಯ ಹೆಗ್ಡೆ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here