ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್: ಸಾಮೂಹಿಕ ವಿವಾಹ ನಿಶ್ಚಿತಾರ್ಥ- ಸಾಮೂಹಿಕ ವಿವಾಹದ ಪ್ರಯುಕ್ತ ನಡೆದ ಸಾಮೂಹಿಕ ನಿಶ್ಚಿತಾರ್ಥದಲ್ಲಿ ಮಂಗಳ ವಸ್ತ್ರ ವಿತರಣೆ

0

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಮಾ.24ರಂದು ನಡೆಯಲಿರುವ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಪೂರ್ವಭಾವಿಯಾಗಿ ವಿವಾಹದ ಸಾಮೂಹಿಕ ನಿಶ್ಚಿತಾರ್ಥ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಸಭಾಂಗಣದಲ್ಲಿ ನಡೆಯಿತು.

ನಯನಾಡು ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕ ಟಿ.ಹರೀಂದ್ರ ಪೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದುಂದು ವೆಚ್ಚದ ವಿವಾಹಗಳ ಬದಲಾಗಿ ಸಾಮೂಹಿಕ ವಿವಾಹ ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.

ಮೂರ್ಜೆ ನಾರಾಯಣ ಗುರು ವಸತಿ ಶಾಲೆ ಪ್ರಾಂಶುಪಾಲ ಸಂತೋಷ್ ಸನಿಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ವಿವಾಹ ಪದ್ಧತಿ ಕುಟುಂಬ ಜೀವನದ ಭದ್ರ ಬುನಾದಿಯಾಗಿದೆ.ಇದು ಕುಟುಂಬದ ಹಾಗೂ ಸಮಾಜದ ನೆಮ್ಮದಿಯ ಸುವ್ಯವಸ್ಥೆಯಾಗಿದೆ ಎಂದರು.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಬಡ, ಹಿಂದುಳಿದ ವರ್ಗದ ಜನತೆ ಅದ್ಧೂರಿಯ ವಿವಾಹ ನಡೆಸಲು ಅಸಾಧ್ಯವಾದ ಕಾರಣ ಸಾಮೂಹಿಕ ವಿವಾಹದ ಮೂಲಕ ವಿಜೃಂಭಣೆಯಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಉದ್ಯಮಿ ನಾಗೇಶ್ ಪ್ರಭು ಮೂರ್ಜೆ ಅವರು ಮಂಗಳ ವಸ್ತ್ರ ವಿತರಿಸಿದರು. ಬಡಗಕಜೆಕಾರು ಪ್ರಾ.ಕೃ.ಸಹಕಾರಿ ಸಂಘದ ಉಪಾಧ್ಯಕ್ಷ ರೋಹಿನಾಥ ಕಂರ್ಬಡ್ಕ, ಬಿ.ಸಿ.ರೋಡ್ ನ್ಯಾಯವಾದಿ ಚಿದಾನಂದ ಕಡೇಶ್ವಾಲ್ಯ, ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷೆ ರೂಪಾ ನವೀನ್, ಮಡಂತ್ಯಾರು ಜೇಸೀ ಅಧ್ಯಕ್ಷ ವಿಕೇಶ್ ಮಾನ್ಯ, ಶ್ರೀ ರಾಮಾಂಜನೇಯ ಭಜನ ಮಂದಿರದ ಅಧ್ಯಕ್ಷ ಶ್ರೀನಿವಾಸ ಅತ್ತಾಜೆ, ಗ್ರಾ.ಪಂ. ಸದಸ್ಯ ಕಾಂತಪ್ಪ ಕರ್ಕೇರ, ಉದ್ಯಮಿ ಗಣೇಶ ಮೂಲ್ಯ ಅನಿಲಡೆ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ, ಪಿಲಾತಬೆಟ್ಟು ಗ್ರಾ.ಪಂ.ಸದಸ್ಯ ಲಕ್ಷ್ಮೀ ನಾರಾಯಣ ಹೆಗ್ಡೆ, ಪಿಲಾತಬೆಟ್ಟು ಪ್ರಾ.ಕೃ.ಸ.ಸಂಘದ ನಿರ್ದೇಶಕಿ ಸರೋಜಾ ಶೆಟ್ಟಿ, ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಬಂಗೇರ ಪುಳಿಮಜಲು, ಕಾರ್ಯದರ್ಶಿ ಜಯರಾಜ ಅತ್ತಾಜೆ, ಮಾಜಿ ಅಧ್ಯಕ್ಷ ಮಾಧವ ಬಂಗೇರ, ರತ್ನಾಕರ ಪಿ.ಎಂ., ಹರೀಶ್ಚಂದ್ರ ಶೆಟ್ಟಿಗಾರ್‌ ಮತ್ತಿತರರು ಉಪಸ್ಥಿತರಿದ್ದರು.

ಶಂಕರ ಶೆಟ್ಟಿ ಬೆದ್ರಮಾರ್ ಮತ್ತು ಗಿರೀಶ್ ಸಾಲ್ಯಾನ್ ಹೆಗ್ಡೆಬೆಟ್ಟುಗುತ್ತು ಅವರು ಗುರಿಕಾರರಾಗಿ ಭಾಗವಹಿಸಿ ನಿಶ್ಚಯ ತಾಂಬೂಲ ನೆರವೇರಿಸಿದರು. ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳ್ಯೆದೆಲೆ , ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಪರಸ್ಪರ ಬದಲಾಯಿಸಿಕೊಂಡರು. ೬ ಜೋಡಿ ವಧು, ವರರಿಗೆ ಮಂಗಳ ವಸ್ತ್ರ ವಿತರಿಸಲಾಯಿತು. ವಧು-ವರರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿ, ವಂದಿಸಿದರು.ರಂಗ ಕಲಾವಿದ ಎಚ್ಕೇ ನಯಾನಾಡು ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here