ಬೆಳ್ತಂಗಡಿ ನಗರಕ್ಕೆ ನೀರು ಸರಬರಾಜು ಆಗುವ ಟ್ಯಾಂಕ್ ಸರಿಪಡಿಸಿ-ಗಡುವು ನೀಡಿ-ಬೇಗ ಸಮಸ್ಯೆ ಇತ್ಯರ್ಥವಾಗಬೇಕು-ಅಧಿಕಾರಿಗಳಿಗೆ ಮನವಿ ಮಾಡಿದ ರಕ್ಷಿತ್ ಶಿವರಾಂ

0

ಬೆಳ್ತಂಗಡಿಯ ಕಲ್ಲಗುಡ್ಡೆಯಲ್ಲಿರುವ ಟ್ಯಾಂಕ್ ನಿಂದ ನೀರು ಸರಬರಾಜು ಆಗುವುದಿಲ್ಲ.2018ರಲ್ಲಿ 13 ಕೋಟಿ ವೆಚ್ಚದಲ್ಲಿ ಮಾಡಲಾಗಿರುವ ಯೋಜನೆಯ ಸದುಪಯೋಗ ಮಾಡದೇ ಇರುವ ಕುರಿತು ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಇಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಳ್ತಂಗಡಿ ನಗರಕ್ಕೆ ನೀರು ಸರಬರಾಜು ಮಾಡಲು ಕಲ್ಲಗುಡ್ಡೆ ಟ್ಯಾಂಕ್ ನೆರವಾಗಬೇಕಿತ್ತು.ಆದರೆ ಅದರ ಉಪಯೋಗ ಆಗುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾಗ ನಗರಸಭೆಯ ಮುಖ್ಯಾಧಿಕಾರಿ ರಾಜೇಶ್ ಸಿಬ್ಬಂದಿ ಕೊರತೆಯ ಬಗ್ಗೆ ತಿಳಿಸಿದರು. ಅಲ್ಲದೇ, ಜಲಮಂಡಳಿಯ ಅಧಿಕಾರಿ ರಕ್ಷಿತ್ ಯೋಜನೆಯ ಆರಂಭದಲ್ಲಿ ಏನೇನಾಗಿತ್ತು ಅಂತ ವಿವರಿಸಿದರು. ಈ ಎಲ್ಲಾ ವಿವರಣೆ ಕೇಳಿದ ರಕ್ಷಿತ್ ಶಿವರಾಂ, ಎಷ್ಟು ದಿನಗಳೊಳಗೆ ಮಾಡ್ತೀರಿ ಅಂತ ಕೇಳಿ,ಮಾಧ್ಯಮದವರಿಗೆ ಉತ್ತರಿಸುವಂತೆ ಸೂಚನೆ ನೀಡಿದರು.

“ಶೀಘ್ರವೇ ಕಲ್ಲಗುಡ್ಡೆ ಟ್ಯಾಂಕ್ ಸರಪಡಿಸುತ್ತೇವೆ. ಅಲ್ಲದೇ, ಸಿಬ್ಬಂದಿಗಳ ಅವಶ್ಯಕತೆಯೂ ಇದೆ. ಅಲ್ಲದೇ, ಕಲ್ಲಗುಡ್ಡೆ ಟ್ಯಾಂಕ್ ಸರಿಪಡಿಸಿದ ನಂತರ ಪ್ರತಿ ವಾರ್ಡ್ ಗೆ ಸಮಯ ನಿಗದಿಪಡಿಸಿ ನೀರು ಸರಬರಾಜು ಮಾಡಲಾಗುವುದು.ಮೇಲಿನ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಆದಷ್ಟು ಬೇಗ ಸರಿಪಡಿಸುತ್ತೇವೆ” ಎಂದು ಮುಖ್ಯಾಧಿಕಾರಿ ರಾಜೇಶ್ ತಿಳಿಸಿದರು.

ಈ ವೇಳೆ ಮಾಧ್ಯಮದವರಿಗೆ ಉತ್ತರಿಸಿದ ರಕ್ಷಿತ್ ಶಿವರಾಂ “ಬೆಳ್ತಂಗಡಿ ನಗರಕ್ಕೆ ನೀರು ಕೊಡಲು 2018ರಲ್ಲಿ ಅಂದಿನ ಶಾಸಕ ವಸಂತಬಂಗೇರ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ 13 ಕೋಟಿ ವೆಚ್ಚದಲ್ಲಿ ತಂದಿರುವ ಯೋಜನೆ ಅದ್ಭುತವಾಗಿದೆ. ಆದರೆ ಟ್ಯಾಂಕ್ ನ ಸರಿಯಾದ ಬಳಕೆ ಮಾಡದಿರುವುದರಿಂದ ನೀರು ಸರಬರಾಜು ಆಗುತ್ತಿಲ್ಲ. ಕಳೆದ ಐದು ವರ್ಷದಲ್ಲಿ ಯಾಕೆ ಆ ಟ್ಯಾಂಕ್ ಬಳಕೆ ಮಾಡಿಲ್ಲ. ವಸಂತ ಬಂಗೇರರು ತಂದ ಯೋಜನೆಯೆಂಬ ಕಾರಣಕ್ಕೆ ನಗಣ್ಯ ಮಾಡಿದ್ದಾರಾ, ರಾಜಕೀಯ ದುರುದ್ದೇಶ ಇತ್ತಾ ಅನ್ನುವುದು ಗೊತ್ತಿಲ್ಲ. ಆದರೆ ಈಗ ಅಧಿಕಾರಿಗಳಿಂದ ಉತ್ತರವನ್ನು ಪಡೆಯಲಾಗಿದ್ದು, ಶೀಘ್ರವೇ ಮಾಡಿಕೊಡುವ ಭರವಸೆಯನ್ನು ನೀಡಿದ್ದಾರೆ. ಸರ್ಕಾರದ ಕಡೆಯಿಂದ ಯಾವುದೇ ಅಗತ್ಯತೆ ಬೇಕಾದರೂ ನಾವು ಮನವಿ ನೀಡಲು ಸಿದ್ಧರಿದ್ದೇವೆ” ಎಂದು ತಿಳಿಸಿದರು.

ಈ ವೇಳೆ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್, ಪ.ಪಂ.ಇಂಜಿನಿಯರ್ ಮಹಾವೀರ ಜೈನ್, ಜಲಮಂಡಳಿಯ ಮುಖ್ಯ ಇಂಜಿನಿಯರ್ ರಕ್ಷಿತ್, ನಗರಸಭೆಯ ಹಿರಿಯ ಸದಸ್ಯ ಜಗದೀಶ್, ಕಾಂಗ್ರೆಸ್ ಮುಖಂಡರುಗಳಾದ ಪ್ರವೀಣ್ ಫೆರ್ನಾಂಡೀಸ್, ಮೆಹಬೂಬ್, ಸತೀಶ್ ಶೆಟ್ಟಿ, ನೀರು ಸರಬರಾಜು ಮಾಡುವ ಫ್ರಾನ್ಸಿಸ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here