ದೇವಾಲಯಗಳಲ್ಲಿ ಸೂಕ್ತ ಭದ್ರತೆ ಹಾಗೂ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ- ವಿಧಾನ ಪರಿಷತ್‍ನಲ್ಲಿ ಪ್ರತಾಪಸಿಂಹ ನಾಯಕ್ ಒತ್ತಾಯ

0

ಬೆಳ್ತಂಗಡಿ: ರಾಜ್ಯದಲ್ಲಿ ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ಇಲಾಖೆ ವ್ಯಾಪ್ತಿಯಲ್ಲಿ ಎ ದರ್ಜೆಯ 205 ಹಾಗೂ ಬಿ ದರ್ಜೆಯ 193 ದೇವಸ್ಥಾನಗಳಿವೆ. ಧಾರ್ಮಿಕ ಸಂಸ್ಥೆಗಳಲ್ಲಿ ಆದಾಯವನ್ನು ಧಾರ್ಮಿಕ ಸಂಸ್ಥೆ ಹಾಗೂ ದೇವಾಲಯಗಳ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ. ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳು ಸೇರಿ, ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗಾಗಿ ಅವಶ್ಯವಿರುವ ಕಡೆ ಸಿ.ಸಿ. ಟಿವಿಗಳನ್ನು ಅಳವಡಿಸಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಧಾರ್ಮಿಕ ದತ್ತಿ ಸಚಿವ ರಾಮಲಿಂಗರೆಡ್ಡಿ ಹೇಳಿದರು.

ವಿಧಾನ ಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಪ್ರತಾಪಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ರಾಜ್ಯದಲ್ಲಿ ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ನೋಂದಾಯಿತ ಎ ದರ್ಜೆ ಹಾಗೂ ಬಿ ದರ್ಜೆ ದೇವಸ್ಥಾನಗಳ ಸಂಖ್ಯೆಯೆಷ್ಟು ಮತ್ತು ಆ ದೇವಾಲಯಗಳ ಮೂಲಕ ಸರ್ಕಾರಕ್ಕೆ ಮೂರು ವರ್ಷಗಳಿಂದ ಸಂದಾಯವಾಗಿರುವ ಆದಾಯವೆಷ್ಟು ಹಾಗೂ ಈ ದೇವಾಲಯಗಳ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳಿಂದ ಸರ್ಕಾರ ವಿನಿಯೋಗಿಸಿರುವ ಅನುದಾನವೆಷ್ಟು? ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗೆ ಸರ್ಕಾರ ಸೂಕ್ತ ಕ್ರಮ ವಹಿಸದೇ ಇರಲು ಕಾರಣವೇನು? ಯಾವ ಕಾಲಮಿತಿಯೊಳಗೆ ದೇವಾಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಹಾಗೂ ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ಭಕ್ತರಿಗೆ ಬೇಕಾದ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗುವುದೇ ಎಂದು ಪ್ರತಾಪಸಿಂಹ ನಾಯಕ್ ಸರ್ಕಾರವನ್ನು ಪ್ರಶ್ನಿಸಿದ್ದರು.

ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ದೇವಸ್ಥಾನಗಳಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಹೈ ಮಸ್ಕ್ ಲ್ಯಾಂಪ್ ಅಳವಡಿಕೆ, ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ವಿಕಲ ಚೇತನರಿಗೆ, ಒಂದು ವರ್ಷದ ಒಳಗಿನ ಮಗುವಿನೊಂದಿಗೆ ಬರುವ ತಾಯಂದಿರಿಗೆ ಹಾಗೂ 65 ವರ್ಷ ತುಂಬಿದ ಹಿರಿಯ ನಾಗರೀಕರಿಗಾಗಿ ದೇವಾಲಯಗಳಲ್ಲಿ ನೇರವಾಗಿ ದೇವರ ದರ್ಶನ ಸೌಲಭ್ಯ ಒದಗಿಸಲು ಸುತ್ತೋಲೆ ಹೊರಡಿಸಲಾಗಿದೆ. ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಪ್ರತ್ಯೇಕ ಕ್ಯಾಬಿನ್/ ಕೊಠಡಿ ನಿರ್ಮಿಸಲು ಸುತ್ತೋಲೆ ಹೊರಡಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here