ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಉಜಿರೆ ಶ್ರೀ ಧ.ಮಂ.ಪದವಿ ಕಾಲೇಜಿನ ವಿದ್ಯಾರ್ಥಿನಿ ಚಂದ್ರಿಕಾ ಆಯ್ಕೆ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕಿ ಕುಮಾರಿ ಚಂದ್ರಿಕಾ ಜ.26ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಗೊಂಡಿದ್ದಾರೆ.

ಇವರು ಉಜಿರೆ ನಿವಾಸಿಗಳಾದ ಅಪ್ಪು ನಾಯರ್ ಹಾಗೂ ಪರಮೇಶ್ವರಿ ದಂಪತಿಗಳ ನಾಲ್ಕನೇ ಪುತ್ರಿಯಾಗಿದ್ದು, ಬಿ.ಎಸ್.ಸಿ ( ರಸಾಯನಶಾಸ್ತ್ರ ಮತ್ತು ಗಣಿತ) ವಿಭಾಗದ ದ್ವಿತೀಯ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಾರೆ.

ಇವರು ಶೈಕ್ಷಣಿಕವಾಗಿಯೂ ಅಲ್ಲದೆ ಕಲೆಯಲ್ಲೂ ಆಸಕ್ತಿಯನ್ನು ಹೊಂದಿದ್ದಾರೆ.ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಸುಗ್ಗಿ ನೃತ್ಯ, ಯಕ್ಷಗಾನ ಹಾಗೂ ಭರತನಾಟ್ಯದಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ.

ತಮಿಳುನಾಡಿನಲ್ಲಿ ನಡೆದ ದಕ್ಷಿಣ ವಲಯದ ಆಯ್ಕೆ ಪ್ರಕ್ರಿಯೆ ಶಿಬಿರದಲ್ಲಿ ಇವರು ಭಾಗವಹಿಸಿ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಮತ್ತು ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here