ಸ್ಪರ್ಧಾತ್ಮಕ ಪರೀಕ್ಷೆ ವಿಜೇತರು, ಸಾಧಕರು, ಪ್ರಾಯೋಜಕರು, ಮಾರ್ಗದರ್ಶಕರಿಗೂ ವಿದ್ಯಾಮಾತಾದಿಂದ ಸನ್ಮಾನ- ಅನುಭವ, ಚುರುಕುತನವನ್ನೆಲ್ಲಾ ಸ್ಪರ್ಧೆ ತುಂಬಿ ಕೊಡುತ್ತೆ- ಅಬಕಾರಿ ಡಿವೈಎಸ್ಪಿ ಅಶೋಕ್ ಪೂಜಾರಿ

0

ಪುತ್ತೂರು: ಯಾವುದೇ ಪರೀಕ್ಷೆ ಬರೆದರೂ ನಿಮ್ಮಲ್ಲಿ ನಿರ್ಲಕ್ಷ್ಯತನವೆಂಬುದು ಇರಬಾರದು.ಜೀವನದಲ್ಲಿ ಕೇವಲ ಒಂದೇ ಸ್ಥರದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜೋತು ಬೀಳದೆ, ವಿವಿಧ ಆಯ್ಕೆಗಳು ನಿಮ್ಮಲ್ಲಿ ಅನುಭವ ಹಾಗೂ ಚುರುಕುತನ ತುಂಬುತ್ತೆ.ಆದ್ದರಿಂದ ಜೀವನದಲ್ಲಿ ಅತ್ಯುತ್ತಮ ಅನುಭವ ಬೇಕೆಂದೆನಿಸಿದರೆ ಬಹಳ ಗಂಭೀರತನದಿಂದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಧೈರ್ಯಯದಿಂದ ಎದುರಿಸಿರಿ ಎಂದು ಪುತ್ತೂರು ವಿಭಾಗದ ಅಬಕಾರಿ ಡಿವೈಎಸ್ಪಿ ಆಶೋಕ್ ಪೂಜಾರಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಜ್ಯಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸೋ ಸಲುವಾಗಿ ಇತ್ತೀಚೆಗೆ ಇಲ್ಲಿನ ವಿವೇಕಾನಂದ ವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಡಿ.21 ರಂದು ವಿದ್ಯಾಮಾತಾ ಅಕಾಡೆಮಿ ಇದರ ಸಭಾಂಗಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪ ಪ್ರಜ್ವಲನೆ ನೆರವೇರಿಸಿ ಅವರು ಮಾತನಾಡಿದರು.

ತಾಲೂಕು ವೈದ್ಯಾಽಕಾರಿ ಡಾ. ದೀಪಕ್ ರೈ ಮಾತನಾಡಿ ,ನಮ್ಮ ಜಿಲ್ಲೆಯ ಜನತೆ ವೈದ್ಯ ,ಇಂಜಿನಿಯರ್ , ಲಾಯರ್ ಮುಂತಾದ ಹುದ್ದೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು , ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಹುದ್ದೆ ಅಲಂಕರಿಸುವುದು ತೀರಾ ಕಡಿಮೆ. ನಾವುಗಳು ಕೂಡ ಅತ್ಯುನ್ನತ ಹುದ್ದೆಗಳನ್ನು ಏರಿ, ಸಮಾಜದ ಏಳಿಗೆಯ ಜೊತೆಗೆ ರಾಷ್ಟ್ರಕ್ಕೂ ಭ್ರಷ್ಟ ರಹಿತ ಸೇವೆ ನೀಡಬೇಕು. ಆ ಮೂಲಕ ನೀವು ರಾಷ್ಟಕ್ಕೆ ಉತ್ತಮ ಕಾರ್ಯ ಸಲ್ಲಿಸಿರಿ ಎಂದು ಹೇಳಿದರು.

ನಗರ ಠಾಣೆ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ , ನಾವೆಲ್ಲ ಸರಕಾರಿ ಹುದ್ದೆ ಏರಿ , ಇನ್ನೊಬ್ಬರನ್ನು ಮೇಲೆತ್ತುವುದೂ ಮುಖ್ಯ.ಕನಸು ಕಂಡರೆ ಸಾಲದು ಅದು ನನಸಾಗೋ ಥರ ಮಾಡಬೇಕು. ಉತ್ತಮ ಕಾರ್ಯಗಳು ನಡೆದಾಗ ಸಮಾಜದ ಸಹಕಾರವೂ ದೊರೆಯಲಿದೆ ಎಂದರು. ವಿವೇಕಾನಂದ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಶ್ರೀಧರ್ ಮಾತನಾಡಿ , ಭವ್ಯ ಭಾರತದ ಭವಿಷ್ಯ ಯುವ ಜನತೆಯಕೈಲಿದೆ. ಆಡಳಿತವೆಲ್ಲಾ ಕೆಟ್ಟದಾಗಿದೆ , ಭ್ರಷ್ಟತೆಗೆ, ಕಾರಣರೂ ನಾವೆಂಬುದನ್ನು ಹೇಳಿ ದೇಶದ ಉತ್ತಮ ಪ್ರಜೆಗಳಾಗಿ ಬೆಳಗಿಯೆಂದು ಹಾರೈಸಿದರು. ಈ ವೇಳೆ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಆಭ್ಯರ್ಥಿಗಳು , ಅಕಾಡೆಮಿಯ ಪುತ್ತೂರು , ಸುಳ್ಯ ಸಂಸ್ಥೆಯ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.
ಅಕಾಡೆಮಿಯ ಅಧ್ಯಕ್ಷ ಭಾಗ್ಯೇಶ್ ರೈ ಪ್ರಾಸ್ತಾವಿಕ ಮಾತನಾಡಿ , ಸ್ವಾಗತಿಸಿದರು. ಶಿಕ್ಷಕಿ ಸಂಹಿತಾ ನಿರೂಪಿಸಿ , ಚಂದ್ರಕಾಂತ್ ನಿರ್ವಹಿಸಿದರು.

ಸಾಧಕರಿಗೆ ಸನ್ಮಾನ ಕಾರ್ಯ…
ಉಡುಪಿ ಜಿಲ್ಲೆಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ , ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಶಶಾಂಕ್ ಹಾಗೂ ವಿವೇಕಾನಂದ ಕಾಲೇಜಿನ ಉಪನ್ಯಾಸಕ ಶ್ರೀಧರ್‌ರವರನ್ನು ಸನ್ಮಾನಿಸಲಾಯಿತು.

ಎಸ್‌ಐ ಆಂಜನೇಯ ರೆಡ್ಡಿಯವರಿಗೂ ಸನ್ಮಾನ..
ಸಾಮಾನ್ಯ ಜ್ಞಾನ ಪರೀಕ್ಷೆಗೆ ಹೆಚ್ಚು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಹಾಜರಾಗುವಂತೆ ಬಹುಮಾನಗಳ ಘೋಷಣೆ ಮಾಡಿ , ಮಾರ್ಗದರ್ಶಕರಾಗಿದ್ದ ನಗರ ಠಾಣಾ ಎಸೈ ಆಂಜನೇಯ ರೆಡ್ಡಿ ಇವರನ್ನು ಗೌರವಿಸಲಾಯಿತು.

ಪ್ರಾಯೋಜಕರಿಗೂ ಗೌರವ …
ಬಹುಮಾನದ ಪ್ರಮುಖ ಪ್ರಯೋಜಕರಾದ ಮೌಲಾ ಶರೀಫ್ ,ವಸಂತ್ ಅಮೀನ್ ,ಅನಿಲ್ ಕಡಬ ,ಮಜೀದ್ ಬೆಂಗಳೂರು ಹಾಗೂ ಆಜಾದ್ ಕಡಬ ಇವರುಗಳ ಪೈಕಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಸಂತ್ ಅಮೀನ್ ಮತ್ತು ಅಜೀದ್ ಕಡಬ ಇವರುಗಳನ್ನು ಸಂಸ್ಥೆಯ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

  • ರೂ. 50 ಸಾವಿರ ಪ್ರಥಮ ಬಹುಮಾನ ಪಡೆದ ಬಸವರಾಜು ಮುದವಿ.
  • ರೂ. 25 ಸಾವಿರ ದ್ವಿತೀಯ ಬಹುಮಾನ ಪಡೆದ ಹಾಲೇಶ ಎ ಗೌಡ್ರ.
  • ರೂ. 12500 ಸಾವಿರ, ತೃತೀಯ ಬಹುಮಾನ ಪಡೆದ ಚೇತನ್ ನಂದಗೌನ್.
    *ರೂ. ತಲಾ 4.5 ಸಾವಿರ ಪಡೆದುಕೊಂಡ ಸಚಿನ್ ಎ ಹಾಗೂ ಶಿವರಾಜ್ ತಕ್ಕಲಕಿ ಹಾಗೂ ತಲಾ 1 ಸಾವಿರ ರೂ.ಗಳನ್ನು ಪಡೆದುಕೊಂಡ 10 ಆಭ್ಯರ್ಥಿಗಳು.

LEAVE A REPLY

Please enter your comment!
Please enter your name here