ಸರಕಾರವು ಇಲಾಖೆಯನ್ನು ರಾಜಕೀಯಗೊಳಿಸುತ್ತಿದೆ-ರಾಜ್ಯದ ಭವಿಷ್ಯವನ್ನು ನಿರ್ಣಯಿಸುವ ಶಿಕ್ಷಣ ಕ್ಷೇತ್ರದಲ್ಲಿ ಯಾರ ಅಭಿಪ್ರಾಯ ಪಡೆಯದೇ ಬದಲಾವಣೆ ಮಾಡುತ್ತಿರುವುದು ಅಪಾಯಕಾರಿ – ಪ್ರತಾಪಸಿಂಹ ನಾಯಕ್

0

ಬೆಳ್ತಂಗಡಿ: ರಾಜ್ಯದ ಭವಿಷ್ಯವನ್ನು ನಿರ್ಣಯಿಸುವ ಶಿಕ್ಷಣ ಕ್ಷೇತ್ರದಲ್ಲಿ, ಯಾರ ಅಭಿಪ್ರಾಯವನ್ನೂ ಪಡೆಯದೆ ಬದಲಾವಣೆ ಮಾಡುತ್ತಿರುವುದು ರಾಜ್ಯದ ದೃಷ್ಟಿಯಿಂದ ಮತ್ತು ಸಮಾಜದ ದೃಷ್ಟಿಯಿಂದ ಆಘಾತಕಾರಿ ವಿಚಾರ.ಸರಕಾರವು ಇಲಾಖೆಯನ್ನು ರಾಜಕೀಯಕರಣಗೊಳಿಸುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅವರು ಪತ್ರಿಕಾ ಹೇಳಿಕೆ ನೀಡಿ ಶಿಕ್ಷಣ ವ್ಯವಸ್ಥೆಗೆ ಆಗುತ್ತಿರುವ ಅಪಚಾರ, ಅನ್ಯಾಯಗಳನ್ನು ಖಂಡಿಸಿದ್ದಾರಲ್ಲದೆ ಇದರ ವಿರುದ್ಧ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ತಕ್ಷಣ ನೂತನ ಶಿಕ್ಷಣ ನೀತಿಯನ್ನು (ಎನ್‍ಇಪಿ) ಪರಿಶೀಲಿಸದೆ, ಅದರಲ್ಲಿರುವ ಲೋಪ ದೋಷಗಳು ಏನು ಎಂಬುದನ್ನು ತಿಳಿಸದೆ ಏಕಾಏಕಿ ಬದಲಿಸುವ ಮಾತನಾಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಯಾರು ಶಿಕ್ಷಣ ಸಚಿವರಾಗಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ, ಪ್ರಿಯಾಂಕಾ ಖರ್ಗೆ ಅವರಲ್ಲಿ ಯಾರು ಶಿಕ್ಷಣ ಸಚಿವರು? ಅಥವಾ ಸರಕಾರದ ಹಿಂದಿರುವ ಬುದ್ಧಿಜೀವಿಗಳು ಶಿಕ್ಷಣ ಸಚಿವರೇ? ಎಂದು ಪ್ರಶ್ನಿಸಿರುವ ಅವರು ಎನ್‌ಇಪಿಯನ್ನು ಬಿಜೆಪಿಯವರು ತಂದಿದ್ದಾರೆ ಎಂಬ ಒಂದೇ ಕಾರಣಕ್ಕೆ ಹಿಂದೆ ತೆಗೆಯೋದು ಬದಲಾವಣೆ ಬಯಸುತ್ತಿರುವ ಶಿಕ್ಷಣ ವ್ಯವಸ್ಥೆಗೆ ಮಾಡುವ ಅನ್ಯಾಯವಾಗಿದೆ. ಭಾರತೀಯ ಯೋಚನೆಗೆ ಅನುಗುಣವಾಗಿ ಶಿಕ್ಷಣ ಪದ್ಧತಿ ಇರಬೇಕು, ಸ್ವದೇಶಿ ಆಲೋಚನೆಗಳನ್ನು ತರಬೇಕೆಂದು ಡಾ.ಅಂಬೇಡ್ಕರ್, ನೇತಾಜಿ, ಮಹಾತ್ಮಾ ಗಾಂಧೀಜಿ ಅವರು ಅನೇಕ ಬಾರಿ ಹೇಳಿರುವುದದನ್ನು ಮುಖ್ಯಮಂತ್ರಿಗಳು ಗಮನಿಸಬೇಕು.ಶಿಕ್ಷಣ ತಜ್ಞರ ಸಮಿತಿ ಮಾಡಿ ಪಠ್ಯಕ್ರಮ, ಪಾಠದಲ್ಲಿ ಬದಲಾವಣೆ ಮಾಡಲಾಗುತ್ತಿತ್ತು. ಆದರೆ ಇದೀಗ ಕಾಂಗ್ರೆಸ್ ರಿಸರ್ಚ್ ಟೀಮಿನಿಂದ ಬಂದ ಸಲಹೆಗಳನ್ನು ಮತ್ತು ಪಾಠಗಳನ್ನು ಸೇರಿಸಲು ನಿರ್ಧರಿಸಿದ್ದಾರೆ.ಶಿಕ್ಷಣ ಇಲಾಖೆಯನ್ನು ರಾಜಕೀಯಕರಣಗೊಳಿಸುತ್ತಿರುವ ರಾಜ್ಯ ಸರಕಾರವಿದು. ಕಾಂಗ್ರೆಸ್ ಮಾತನಾಡುವ ಮೊದಲು ಎನ್‍ಇಪಿಯನ್ನು ಮೊದಲು ಓದಬೇಕು. ಅದರಲ್ಲಿ ಇರುವ ಲೋಪದೋಷಗಳನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರವು ಶ್ರೇಷ್ಠ ವಿಜ್ಞಾನಿ ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದು 6 ವರ್ಷಗಳ ಕಾಲ ಅಧ್ಯಯನ ನಡೆಸಿ ಶಿಫಾರಸು ನೀಡಿತ್ತು. ಈ ಶಿಫಾರಸುಗಳನ್ನು ಜನರ ಮುಂದಿಡಲಾಗಿತ್ತು. 2 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಅವುಗಳನ್ನೂ ಸೇರಿಸುವ ಪ್ರಯತ್ನ ಮಾಡಿದ್ದರು. ಗ್ರಾಮಸಭೆಗಳಲ್ಲೂ ಇದನ್ನು ಇಡಲಾಗಿತ್ತು. ರಾಜಕೀಯ ದೃಷ್ಟಿ ಮತ್ತು ವಿರೋಧಕ್ಕಾಗಿಯೇ ವಿರೋಧ ಕಾಂಗ್ರೆಸ್ ಮಾಡುತ್ತಿದೆ.ಕರ್ನಾಟಕದ ಯುವಜನರ ಭವಿಷ್ಯ ದೃಷ್ಟಿಯಿಂದ ಇದು ಕೆಟ್ಟ ನಿರ್ಣಯವಾಗಲಿದೆ. ಸ್ಪರ್ಧಾತ್ಮಕ ಶಿಕ್ಷಣದ ದೃಷ್ಟಿಯಿಂದಲೂ ಇದು ಸರಿಯಲ್ಲ. ಶ್ರೀಮಂತರ ಮಕ್ಕಳು ಸಿಬಿಎಸ್‍ಇ, ಐಸಿಎಸ್‍ಇ ಶಿಕ್ಷಣದಲ್ಲಿ ಓದುತ್ತಿದ್ದಾರೆ. ಬಡ ಮಕ್ಕಳು ಮೆಕಾಲೆಯ ಗುಲಾಮಿ ಶಿಕ್ಷಣ ಪದ್ಧತಿಯಡಿ ಓದಬೇಕೆಂಬ ಆಶಯ ಕಾಂಗ್ರೆಸ್ ನದ್ದಾಗಿದೆ. ಕರ್ನಾಟಕದ ಶೇ.50ರಿಂದ 60ರಷ್ಟು ಖಾಸಗಿ ಶಾಲೆಗಳ ಮಾಲೀಕರು ರಾಜಕಾರಣಿಗಳು.ಸರಕಾರಿ ಶಾಲೆಗಳನ್ನು ಮುಚ್ಚಿಸುವ ಹಿಡನ್ ಅಜೆಂಡ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ಹೊಸ ಶಿಕ್ಷಣ ನೀತಿ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ಕೊಡುತ್ತದೆ.

ಈ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಅನೇಕ ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. 1968ರಲ್ಲಿ ಮೊದಲನೇ ಶಿಕ್ಷಣ ನೀತಿಯನ್ನು ಬಳಿಕ 1986ರಲ್ಲಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಶಿಕ್ಷಣ ನೀತಿಯನ್ನು ತರಲಾಯಿತು. ಕೊಠಾರಿಯ ಆಯೋಗದ ಅಧ್ಯಯನದ ಬಳಿಕ ಅನೇಕ ಶಿಫಾರಸುಗಳನ್ನು ಮಾಡಿತ್ತು. ಶಿಕ್ಷಣ ಕ್ಷೇತ್ರದ ಕೊರತೆಗಳನ್ನು ಅಧ್ಯಯನ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿ ಇರಬೇಕೆಂದು ತಿಳಿಸಲಾಗಿತ್ತು. ಅಲ್ಲಿನವರೆಗೆ ರಾಜ್ಯಗಳಿಗೆ ಬೇಕಾದಂತೆ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಅನ್ವಯಿಸಲಾಗುತ್ತಿತ್ತು.

ಕೊಠಾರಿಯ ಆಯೋಗವು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮವನ್ನು ಶಿಫಾರಸು ಮಾಡಿತ್ತು. ರಾಷ್ಟ್ರದಾದ್ಯಂತ ಒಂದೇ ರೀತಿಯ ಪಠ್ಯಕ್ರಮದ ಕುರಿತು ತಿಳಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರಕಾರ 1986ರ ಬಳಿಕವೂ ಕೇಂದ್ರ, ರಾಜ್ಯಗಳಲ್ಲಿ ಆಡಳಿತದಲ್ಲಿದ್ದರೂ ಆ ಶಿಫಾರಸುಗಳನ್ನು ಪಾಲಿಸಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದ ಕೇಂದ್ರ ಸರಕಾರವು ಈ ಶಿಫಾರಸನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿತ್ತು. ವಾಜಪೇಯಿಯವರು ಇದನ್ನು ಕಾಂಗ್ರೆಸ್‍ನವರು, ಇಂದಿರಾ ಗಾಂಧಿಯವರು ಮಾಡಿದ್ದೆಂದು ಯೋಚಿಸಿರಲಿಲ್ಲ ಮತ್ತು ಅವರು ರಾಜಕೀಯ ಮಾಡಲಿಲ್ಲ.ನಂತರ ಬಂದ ಮನಮೋಹನ್ ಸಿಂಗ್ ಸರಕಾರವೂ ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮುಂದುವರೆಸಿತು.ದೇಶ, ಸಮಾಜ, ಮುಂದಿನ ಜನಾಂಗದ ದೃಷ್ಟಿಯಿಂದ ಶಿಕ್ಷಣ ಹೇಗಿರಬೇಕು ಎಂಬ ಕುರಿತು ಯೋಚನೆ ಮಾಡಿತ್ತೇ ಹೊರತು ಹಿಂದಿನ ಸರಕಾರ ಮಾಡಿದೆ.ನಾವೇಕೆ ಅದನ್ನು ಮುಂದುವರೆಸಬೇಕು ಎಂದು ಯೋಚಿಸಲಿಲ್ಲ.ಮನಮೋಹನ್ ಸಿಂಗ್ ಸರಕಾರ ಅನುಷ್ಠಾನಕ್ಕೆ ತರಲು ಬಯಸಿದ್ದ ರಾಷ್ಟ್ರೀಯ ಪಠ್ಯಕ್ರಮವನ್ನು ಇಲ್ಲಿನ ಕಾಂಗ್ರೆಸ್ ರಾಜ್ಯ ಸರಕಾರ ಜಾರಿಗೊಳಿಸಲಿಲ್ಲ. ಯಡಿಯೂರಪ್ಪ ಅವರ ಸರಕಾರವು ಅದನ್ನು ಜಾರಿಗೊಳಿಸಲು ಮುಂದಾಗಿತ್ತು. ಬಿಜೆಪಿ ರಾಜ್ಯ ಸರಕಾರಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿರಲಿಲ್ಲ.ಹೊಸ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆಯುವ ನಿರ್ಣಯ ರಾಜ್ಯ ಮತ್ತು ಮಕ್ಕಳ ಹಿತದೃಷ್ಟಿಯಿಂದ ಒಳ್ಳೆಯದಾಗಿರುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರಲ್ಲದೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರ ತನ್ನ ಹಠಮಾರಿ ತುಘಲಕ್ ನೀತಿಯನ್ನು ಕೈ ಬಿಡದ್ದಿದ್ದರೆ ಬಿಜೆಪಿ ರಾಜ್ಯ ಮತ್ತು ಶಿಕ್ಷಣದ ಹಿತದೃಷ್ಟಿಯಿಂದ ಜನತೆಯ ಪರವಾಗಿ ಹೋರಾಟ ಮಾಡುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here