ವೇಣೂರು: ಕೊರಗಜ್ಜ ಕಟ್ಟೆಗೆ ಬೆಂಕಿ ಹಚ್ಚಿದ ಪ್ರಕರಣ: ಪೊಲೀಸ್ ಭದ್ರತೆಯಲ್ಲಿ ತಹಶೀಲ್ದಾರರಿಂದ ಸರ್ವೆ

0

ಬೆಳ್ತಂಗಡಿ: ಭೂಮಿ ವಿಚಾರಕ್ಕೆ ಗಲಾಟೆ ನಡೆದು ಕಾರ್ಣಿಕ ದೈವ ಕೊರಗಜ್ಜನ ಗುಡಿಗೇ ಬೆಂಕಿ ಹಚ್ಚಿದ ಘಟನೆ ವೇಣೂರು ಗ್ರಾಮದ ಬಾಡಾರಿನ ಕೊರಗಕಲ್ಲು ಬಳಿಯ ಕೊರಗಜ್ಜನ ಕಟ್ಟೆಯಲ್ಲಿ ಜು.11. ರಂದು ನಡೆದಿತ್ತು.

ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಹಲವಾರು ಮಂದಿ ತನಿಖೆಗೆ ಆಗ್ರಹಿಸಿದ್ದರು.ಈ ಹಿನ್ನಲೆ ಇಂದು (ಜು.17) ರಂದು ಬೆಳ್ತಂಗಡಿ ತಹಶಿಲ್ದಾರ್ ಸುರೇಶ್ ಕುಮಾರ್ ನೇತೃತ್ವದಲ್ಲಿ ಜಾಗದ ಸರ್ವೆ ನಡೆದಿದ್ದು ಸರ್ವೆಯಲ್ಲಿ ಕೊರಗಜ್ಜನ ಕಟ್ಟೆ ಇರುವ ಸ್ಥಳ ಸರಕಾರಕ್ಕೆ ಸೇರಿದ್ದು ಎಂದು ತಿಳಿದು ಬಂದಿದೆ.
ಊರವರ ಸಹಕಾರದಲ್ಲಿ ನಡೆದ ಸರ್ವೆ ಕಾರ್ಯದಲ್ಲಿ ಬೆಳ್ತಂಗಡಿ ತಹಶಿಲ್ದಾರ್ ಸುರೇಶ್ ಕುಮಾರ್ ಮತ್ತು ಸಿಬ್ಬಂದಿಗಳು, ಸರ್ವೆ ಇಲಾಖೆ ಅಧಿಕಾರಿಗಳು, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇಸ್ಪೆಕ್ಟರ್ ನಂದಕುಮಾರ್, ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಸೌಮ್ಯ ಮತ್ತು ಸಬ್ ಇಸ್ಪೆಕ್ಟರ್ ಆನಂದ ಹಾಗೂ 20 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಭದ್ರತೆ ವಹಿಸಿದರು.

ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಬಾಡಾರಿನ ಕೊರಗಕಲ್ಲು ಬಳಿ ಕೊರಗಜ್ಜನ ಕಟ್ಟೆ ಇದೆ. ಸಾರ್ವಜನಿಕರು ಸಮಿತಿ ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ ಮಾಡುತ್ತಿದ್ದರು.ಆದರೆ ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು.ಗುಡಿ ಇರುವ ಜಾಗ ಖಾಸಗಿ ಕುಟುಂಬಸ್ಥರದ್ದು ಸಾರ್ವಜನಿಕ ಹಸ್ತಕ್ಷೇಪ ಮಾಡಬಾರದೆಂದು ತಗಾದೆ ಎತ್ತಿದ್ದರು. ಈ ತಗಾದೆ ಕೆಲವು ವರ್ಷಗಳಿಂದ ಏರ್ಪಟ್ಟಿತ್ತು. ಬಳಿಕ ಆ ವ್ಯಕ್ತಿ ಗುಡಿಗೆ ಬೆಂಕಿ ಹಚ್ಚಿದ್ದು, ಇದನ್ನು ಖಂಡಿಸಿದ ಸ್ವಾಮಿ ಕೊರಗಜ್ಜ ಸಮಿತಿಯು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

LEAVE A REPLY

Please enter your comment!
Please enter your name here