ಕರಾವಳಿಯ ಮೂವರು ಬಿಜೆಪಿಯವರಿಗೆ ಸಿಡಿ ಭಯವೇಕೆ-ಬಿಜೆಪಿಯ ಡ್ಯಾಂ ಒಡೆದಿದೆ-ಮಂಜುನಾಥನಲ್ಲಿ ರಕ್ಷಿತ್ ಶಿವರಾಂ ಪರ ಪ್ರಾರ್ಥಿಸಿದ್ದೇನೆ-ಉಜಿರೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಡಿ ಕೆ ಶಿವಕುಮಾರ್ ಹೇಳಿಕೆ

0

ಉಜಿರೆ- ಕೆ ಪಿ ಸಿ ಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯ ದರ್ಶನ ಮಾಡಿದ ನಂತರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು. ತದ ಬಳಿಕ ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ಉಜಿರೆಯಲ್ಲಿ ನಿಗದಿಪಡಿಸಲಾಗಿದ್ದ ರಕ್ಷಿತ್ ಶಿವರಾಂ ಪರ ಪ್ರಚಾರ ಸಭೆಯಲ್ಲಿ ಭಾಗಿಯಾದರು.

ಉಜಿರೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್ -ನಾನು ಮಂಜುನಾಥ ಸ್ವಾಮಿಯ ಭಕ್ತ. ಇಂದು ಕೂಡ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವಾದ ಮಾಡುವಂತೆ ಮಂಜನಾಥನಲ್ಲಿ ಕೇಳಿಕೊಂಡಿದ್ದೇನೆಂದರು.ಇದೇ ವೇಳೆ ಪಕ್ಷದ ಲೆಕ್ಕಾಚಾರ,ಹಲವು ಸರ್ವೇ ಮಾಡಿ‌ ಕಾಂಗ್ರೆಸ್ ಈ ಬಾರಿ ಹೊಸ ಪ್ರಯತ್ನ ಮಾಡಿದ್ದೇವೆ. ಈ ಜಿಲ್ಲೆಯಲ್ಲಿ ನಾಲ್ಕು ಜನ ಹೊಸಬರಿಗೆ ಟಿಕೆಟ್ ನೀಡಿದ್ದೇವೆ. ಈ ಬಾರಿಯ ಚುನಾವಣಾ ದಿನ ಭ್ರಷ್ಟಾಚಾರವನ್ನು ಕಿತ್ತು ಬಿಸಾಡೋ ದಿನ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.ಕರಾವಳಿಯ ಮೂವರಿಗೆ ಸಿಡಿ ಭಯವೇಕೆ.ಪ್ರಚಾರ ಸಭೆಯಲ್ಲಿ ಭಾಷಣ ಮುಂದುವರೆಸಿದ ಡಿಕೆ ಶಿವಕುಮಾರ್ “ಬಾಂಬೇ ಬಾಯ್ಸ್ ಸಿಡಿ ವಿಚಾರದಲ್ಲಿ ಸ್ಟೇ ತಂದಿರೋದು ಗೊತ್ತಿತ್ತು. ಆದರೆ ಈಗ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಬಿಜೆಪಿಯವರು ಕೋರ್ಟ್ ಸ್ಟೇ ತಂದಿದ್ದು ಯಾಕೆ? ಎಂದು ಪ್ರಶ್ನಿಸಿದರು. ಬಿಜೆಪಿಯ ಗರ್ಭಗುಡಿಯಲ್ಲಿ ಏನೆಲ್ಲಾ ಇದೆ ಅನ್ನೋದು ಗೊತ್ತಾಗಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹತ್ತು ಲಕ್ಷ ಕೋಟಿ ಹೂಡಿಕೆ ಮಾಡಿದ್ದೇವೆಂದು ಹೇಳುತ್ತಾರೆ. ಕರಾವಳಿಯಲ್ಲಿ ಕನಿಷ್ಠ 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸುವ ಜೊತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಕರಾವಳಿಗೆ ಪ್ರತ್ಯೇಕ ಪಾಲಿಸಿ ಮಾಡುತ್ತೇವೆ . ಇಲ್ಲಿನ ಜನರು ದುಬೈ, ಮುಂಬೈಗೆ ಹೋಗುವ ಸ್ಥಿತಿ ಬರಬಾರದು ಎಂದರು.ಬಿಜೆಪಿ ಡ್ಯಾಂ ಒಡೆದು ಹೋಗಿದೆ-ಡಿ ಕೆ ಶಿವಕುಮಾರ್ ಸಭೆಯಲ್ಲಿ ಡಿ ಕೆ ಶಿವಕುಮಾರ್ ಮಾತನಾಡುತ್ತಾ” ಬಿಜೆಪಿ ಡ್ಯಾಮ್ ಒಡೆದು ಹೋಗಿದೆ, ಇನ್ನು ಡ್ಯಾಮಲ್ಲಿ ನೀರು ನಿಲ್ಲಲ್ಲ. 30 ವರ್ಷ ಪಕ್ಷಕ್ಕೆ ಜೀವನ ಮುಡಿಪಾಗಿಟ್ಟ ಶೆಟ್ಟರ್ ಬಿಜೆಪಿ ಬಿಟ್ಟು ಬಂದಿದ್ದಾರೆ.ಸವದಿ, ಪುಟ್ಟಣ್ಣ ಹೀಗೆ ಸಾಲು ಸಾಲು ಮಂದಿ ಕಾಂಗ್ರೆಸ್ ಗೆ ಬಂದಿದ್ದಾರೆ. ಡಜನ್ ಗಟ್ಟಲೆ ಹಾಲಿ ಶಾಸಕರು ಕಾಂಗ್ರೆಸ್ ಬರಲು ರೆಡಿಯಾಗಿದ್ದರು, ನಮ್ಮಲ್ಲಿ ಜಾಗ ಇರಲಿಲ್ಲ ಎಂದು ಲೇವಡಿ ಮಾಡಿದರು.141 ಸೀಟು ಗೆಲ್ಲುವ ವಿಶ್ವಾಸದಲ್ಲಿ ಡಿ ಕೆ ಶಿವಕುಮಾರ್ ಇದೇ ವೇಳೆ ಕಾಂಗ್ರೆಸ್ ಖಂಡಿತವಾಗಿ ವಿಧಾನಸಭಾ ಚುನಾವಣೆಯಲ್ಲಿ 141 ಸೀಟ್ ಗೆಲ್ಲುತ್ತದೆ ಎಂದು ಸಾರಿದ್ರು. ಹೀಗೆ ಭಾಷಣದುದ್ದಕ್ಕೂ ಡಿ ಕೆ ಶಿವಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದರು.

ಇದೇ ವೇಳೆ ರಕ್ಷಿತ್ ಶಿವರಾಂ ಸ್ವಾಗತಿಸಿ ಬೆಳ್ತಂಗಡಿಯ ಏಳಿಗೆಗೆ ಹಲವಾರು ಬೇಡಿಕೆಗಳನ್ನು ಡಿ ಕೆ ಶಿವಕುಮಾರ್ ಮುಂದಿಟ್ಟರು. ಸಭೆಯಲ್ಲಿ ಕೆಪಿಸಿಸಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ, ಮಾಜಿ ಸಚಿವ ಅಭಯ ಚಂದ್ರ ಜೈನ್, ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಅಧ್ಯಕ್ಷರುಗಳಾದ ರಂಜನ್ ಗೌಡ, ಶೈಲೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ, ಪ್ರಮುಖರಾದ ಅಭಿನಂದನ್, ಅಭಿದೇವ್, ಸೆಬಾಸ್ಟಿಯನ್, ಧರಣೇಂದ್ರ ಕುಮಾರ್ , ಕೇಶವ ಬೇಳಾಲ್, ಪ್ರವೀಣ್ ಪೆರ್ನಾಂಡೀಸ್, ರಾಜಶೇಖರ್ ಅಜ್ರಿ, ಟಿ ಎಂ ಸಾಹೀಲ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here