ಇಂದಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಕಾಮಗಾರಿಗಳಲ್ಲಿ ಭ್ರಷ್ಟಾಚಾರ- ವಸಂತ ಬಂಗೇರ ಆರೋಪ: ಲೋಕಾಯುಕ್ತಕ್ಕೆ ದೂರು-ಎಚ್ಚರಿಕೆ

0

ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಮಾಜಿ ಶಾಸಕ ವಸಂತ ಬಂಗೇರ ಅವರು ಭ್ರಷ್ಟಾಚಾರಿಗಳ ವಿರುದ್ಧ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅವರು ಮಾ.7ರಂದು ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಬಳಿಕ ಪಂಚಾಯತ್ ಕಛೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.


ಬಿಜೆಪಿ ಆಡಳಿತದಲ್ಲಿ ಗ್ರಾಮ ಪಂಚಾಯತ್ ನಿಂದ ಹಿಡಿದು ರಾಜ್ಯ ಸರ್ಕಾರದವರೆಗೂ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲಾ ಕಡೆಗಳಲ್ಲೂ ನುಂಗಣ್ಣಗಳೇ ತುಂಬಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದೊಂದು ಕಾಮಗಾರಿಗೆ ಎರಡೆರಡು ಬಿಲ್ಲು ಮಾಡಲಾಗಿದೆ, ಸಾರ್ವಜನಿಕರು ನಡೆಸಿದ ಕಾಮಗಾರಿಗೆ ಪಂಚಾಯತ್ ಬಿಲ್ ಮಾಡಿರುವುದು, ಪ.ಜಾತಿ/ಪಂಗಡಗಳ ಅನುದಾನ ದುರುಪಯೋಗ , ಸೋಲಾರ್ ನೀಡದೆ ವಂಚನೆ, ವಿಕಲಚೇತನರ ಹೆಸರಿನಲ್ಲೂ ಭ್ರಷ್ಟಾಚಾರ ಸೇರಿದಂತೆ ಹತ್ತಾರು ಕಾಮಗಾರಿಗಳಲ್ಲಿ ನಕಲಿ ಬಿಲ್ ಮಾಡಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿದ ಅವರು ಪರಿಶಿಷ್ಟ ಜಾತಿ/ಪಂಗಡದ ಅನುದಾನ ದುರುಪಯೋಗ ಮಾಡಿದ ಬಗ್ಗೆ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೆ ನನ್ನ ಶಾಸಕತ್ವದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದರು. ಶಾಸಕ ಹರೀಶ್ ಪೂಂಜಾ ಮತ್ತು ಅವರ ಬಿಜೆಪಿ ಸದಸ್ಯರು ಭ್ರಷ್ಟಾಚಾರದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುತ್ತಿದ್ದಾರೆ ಎಂದು ಬಂಗೇರ ಟೀಕಿಸಿದರು.


ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ ಬಿಜೆಪಿ ಮಂತ್ರಿಗಳಿಂದ ಹಿಡಿದು ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯರು ಬಡವರ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದರು. ಬಿಜೆಪಿ ಸುಲಿಗೆಕೋರರ ಪಕ್ಷವೆಂದು ಆರೋಪಿಸಿದ ಅವರು ಒಂದು ಪಂಚಾಯತ್ ನಲ್ಲಿ 20 ಲಕ್ಷಕ್ಕೂ ಹೆಚ್ಚು ರೂಪಾಯಿ ಭ್ರಷ್ಟಾಚಾರ ನಡೆದರೆ ತಾಲೂಕಿನ ಇನ್ನಿತರ ಬಿಜೆಪಿ ಆಡಳಿತದ ಪಂಚಾಯತ್ ಗಳಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿರಬಹುದು ಎಂದು ಪ್ರಶ್ನಿಸಿದರು. ಇಂದಬೆಟ್ಟು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಜಯರಾಂ ಗೌಡ ಬಂಗಾಡಿ ಸ್ವಾಗತಿಸಿದರು. ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ , ಶೈಲೇಶ್ ಕುಮಾರ್ ಕುರ್ತೋಡಿ , ಪದಾಧಿಕಾರಿಗಳಾದ ಅಭಿನಂದನ್ ಹರೀಶ್ ಕುಮಾರ್ , ಅನಿಲ್ ಪೈ , ಭರತ್ ಕುಮಾರ್ , ಅಶ್ವಥ್ ರಾಜ್ ಇಂದಬೆಟ್ಟು , ತಾ.ಪಂ ಮಾಜಿ ಸದಸ್ಯ ಗಣೇಶ್ ಕನಾಲು , ಕಾರ್ಮಿಕ ಘಟಕದ ಸುರೇಶ್ ಇಂಚರ , ಗ್ರಾಮ ಪಂಚಾಯತ್ ಸದಸ್ಯ ವೀರಪ್ಪ ಮೊಯ್ಲಿ , ಅಬ್ದುಲ್ ಸಮಾದ್ , ರಾಜೇಶ್ ಪುದುಶೇರಿ , ಪ್ರವೀಣ್ ಗೌಡ ವಿ.ಜಿ , ಮಧುಕರ ಸುವರ್ಣ , ರವಿ ನೇತ್ರಾವತಿ ನಗರ , ನಾರಾಯಣ ಟಿ ನೇತ್ರಾವತಿ ನಗರ , ಎಲಿಯಮ್ಮ ಬಂಗಾಡಿ , ಅಜಯ್ ಎಜೆ ಮಟ್ಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here