ಶ್ರೀ ವಿಜಯದಾಸರ ೨೬೭ನೇ ಆರಾಧನಾ ಮಹೋತ್ಸವ ಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಸಂಸ್ಥಾನ ಶ್ರೀ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರ ಆಶೀರ್ವಚನದೊಂದಿಗೆ ಸಂಪುಟ ಶ್ರೀ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆವರಣದಲ್ಲಿ ನ.2 ರಂದು ಚಾಲನೆ ನೀಡಲಾಯಿತು. ವಿಜಯದಾಸರು (ಕ್ರಿ.ಶ.೧೬೮೨ – ೧೭೫೫) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.
ವಿಜಯದಾಸರು ಅಸಂಖ್ಯಾತ ಸುಳಾದಿಗಳನ್ನು ಬರೆದಿರುವ ಕಾರಣ ಸುಳಾದಿ ದಾಸರೆಂದು ಪ್ರಸಿದ್ಧಿರಾಗಿದ್ದಾರೆ. ಪ್ರತಿ ವರ್ಷ ಕಾರ್ತೀಕ ಶುಕ್ಲ ದಶಮಿ ದಿನದಂದು ವಿಜಯದಾಸರ ಆರಾಧನೆಯನ್ನು ನಡೆಸಲಾಗುತ್ತದೆ.
ಬೆಳಗ್ಗೆ ಜ್ಞಾನಯಜ್ಞದ ಉದ್ಘಾಟನೆ ನಡೆಯಿತು. ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸೋಸಲೆ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು, ಶ್ರೀ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು, ಆದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳಗ್ಗೆ ವೀರನಾರಾಯಣಾಚಾದ್ ಪಾಂಡುರಂಗಿ ಅವರಿಂದ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮಹಿಮೆ, ಶ್ರೀಹರಿ ವಾಳ್ವೇಕರ್ ಅವರಿಂದ ಶ್ರೀ ಹಯಗ್ರೀವದೇವರ ಸುಳಾದಿ, ನಾಗಸಂಪಿಗೆ ಆಚಾರ್ ಅವರಿಂದ ಶ್ರೀ ವ್ಯಾಸರಾಜರ ಸ್ತೋತ್ರ ಸುಳಾದಿ ಪ್ರವಚನ ನಡೆಯಿತು. ಅಪರಾಹ್ನ ಅಮೃತೋಪದೇಶ ನಡೆದು ಶ್ರೀಗಳವರ ಭಿಕ್ಷಾ ಸ್ವೀಕಾರ, ತೀರ್ಥಪ್ರಸಾದ ಜರುಗಿ, ಬಳಿಕ ವಿವಿಧ ಪ್ರವಚನ ಮಾಲಿಕೆ ನಡೆಯಿತು. ನಂತರ ಪ್ರಸಿದ್ಧ ಗಾಯಕರಾದ ಮೈಸೂರು ರಾಮಚಂದ್ರಾಚಾರ್ಯರ ನೇತೃತ್ವದಲ್ಲಿ ದ್ವಂದ್ವ ಪಿಟಿಲುವಾದನ ಸಂಗಿತ ಸಾಮ್ರಾಟ್ ಮೈಸೂರು ನಾಗರಾಜ್ ಮತ್ತು ಡಾ| ಮೈಸೂರು ಮಂಜುನಾಥ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.