ಅರಂತೋಡು- ತೊಡಿಕಾನ ಪ್ರಾ.ಕೃ.ಪ.ಸ.ಸಂಘದಲ್ಲಿ ನ. 17ರಂದು ಸಹಕಾರಿ ಸಪ್ತಾಹ ಕಾರ್ಯಕ್ರಮ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಅ. 29 ರಂದು ಸೊಸೈಟಿಯ ಸಿರಿಸೌಧ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ವಹಿಸಿದ್ದು, ಸಹಕಾರಿ ಸಪ್ತಾಹದ ಬಗ್ಗೆ ಮತ್ತು ಸೊಸೈಟಿಯ ಸಮಸ್ಯೆ ಬಗ್ಗೆ ಮಾತನಾಡಿದರು.
ನ. ೧೭ರಂದು ನಡೆಯುವ ಸಹಕಾರಿ ಸಪ್ತಾಹದ ಬಗ್ಗೆ ಅರಂತೋಡು- ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆಯವರು ಸಭೆಗೆ ವಿವರಿಸಿದರು. ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್, ಸಹಕಾರಿ ಸಪ್ತಾಹಕ್ಕೆ ಬೇಕಾದ ಖರ್ಚುವೆಚ್ಚದ ಬಗ್ಗೆ ಸಭೆಗೆ ತಿಳಿಸಿದರು. ಸಭೆಯಲ್ಲಿ ನ. ೧೩ರಂದು ಎಲ್ಲಾ ಸಹಕಾರಿ ಸಂಘದ ಸಿಬ್ಬಂದಿಗಳಿಗೆ ಕ್ರಿಕೆಟ್ ಪಂದ್ಯಾಟ ನಡೆಸಲಾಗುವುದು. ಅಲ್ಲದೆ ಮಹಿಳಾ ಸಿಬ್ಬಂದಿಗಳಿಗೆ ವಿಶೇಷ ಆಟೋಟ ಸ್ಪರ್ಧೆಯನ್ನು ನಡೆಸಲಾಗುವುದೆಂದು ತೀರ್ಮಾನಿಸಲಾಯಿತು. ವಸಂತ ಭಟ್ ತೊಡಿಕಾನರವರ ಸ್ಮರಣಾರ್ಥ ಸಹಕಾರ ಸಾಂತ್ವಾನ ನಿಧಿ ಲೋಕಾರ್ಪಣ ಕಾರ್ಯಕ್ರಮ ಹಮ್ಮಿಕೊಳ್ಳುವುದೆಂದು ತೀರ್ಮಾನಿಸಲಾಯಿತು.
ಇ-ಸ್ಟಾಂಪಿoಗ್ ಉದ್ಘಾಟನಾ ಕಾರ್ಯಕ್ರಮ, ಸಹಕಾರಿ ಸಮುದಾಯ ಸಭೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳುವುದು, 2021-22 ನೇ ಸಾಲಿನ ನಿವೃತ್ತ ಸಹಕಾರಿ ಸಂಘದ ಸಿಬ್ಬಂದಿಗಳನ್ನು ಅಭಿನಂದಿಸುವ ಕಾರ್ಯಕ್ರಮ, ಯಶಸ್ವಿನಿ ವಿಮೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಸರಕಾರಿ ಮತ್ತು ಸಹಕಾರ ಸಂಘದ ವೇತನ ಪಡೆಯುವ ಸಿಬ್ಬಂದಿಗಳಿಗೆ ಯಶಸ್ವಿನಿ ಅನ್ವಯವಾಗುವುದಿಲ್ಲ ಎಂಬುದರ ಬಗ್ಗೆ, ಇದನ್ನು ಸರಿಪಡಿಸುವ ಬಗ್ಗೆ, ರೇಷನ್ ವಿತರಣೆಯ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ಚೊಕ್ಕಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೇಶವ ಕರ್ಮಾಜೆ, ಅರಂತೋಡು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ ಉಪಸ್ಥಿತರಿದ್ದರು.