ಬೆಳ್ತಂಗಡಿ: ಪ್ರತಿಷ್ಠಿತ ಭಾರತೀಯ ವೈದಕೀಯ ಸಂಘ ಮಂಗಳೂರು ಶಾಖೆಯಲ್ಲಿ 2021-22ನೇ ಸಾಲಿನಲ್ಲಿ ಕಾರ್ಯದರ್ಶಿಯಾಗಿ ಹಲವಾರು ಜನಪರ ಯೋಜನೆ ಹಾಗೂ ವೈದ್ಯಕೀಯ ರಂಗದಲ್ಲಿ ವಿಶಿಷ್ಟ ಸಾಧನೆ ಮಾಡಿದ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರ ರೋಗ ತಜ್ಞ ಡಾ| ಸದಾನಂದ ಪೂಜಾರಿ ಬೆಸ್ಟ್ ಕಾರ್ಯದರ್ಶಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅ. 29 ರಂದು ಸಂಜೆ 4.30ಕ್ಕೆ ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ನಡೆಯಲಿರುವ 88ನೇ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ವೈದ್ಯಕೀಯ ಸಮ್ಮೇಳನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ರವರಿಂದ ಈ ಪ್ರಶಸ್ತಿಯನ್ನು ಮಂಗಳೂರು ಐಎಂಎ ಪರವಾಗಿ ಡಾ| ಸದಾನಂದ ಪೂಜಾರಿಯವರು ಸ್ವೀಕರಿಸಲಿದ್ದಾರೆ.
ಜನಸ್ನೇಹಿ, ಸಮಾಜಮುಖಿ ಹೆಸರಾಂತ ವೈದ್ಯರಾಗಿರುವ ಡಾ. ಸದಾನಂದ ಪೂಜಾರಿಯವರು ಕಳೆದ ಹಲವು ವರ್ಷಗಳಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಪ್ರತಿ ದಿನ 60 ಮಂದಿಗೆ ಡಯಾಲಿಸಿಸ್ ಮಾಡುವ ಮೂಲಕ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದ ಕೀರ್ತಿಗೆ ವೆನ್ಲಾಕ್ ಆಸ್ಪತ್ರೆ ಪಾತ್ರವಾಗಿದೆ. ಇದಕ್ಕೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿಯವರ ಅವಿರತ ಶ್ರಮ ಸೇವೆಯೆ ಪ್ರಯತ್ನವೇ ಪ್ರಮುಖವಾಗಿದೆ. ಡಾ. ಸದಾನಂದ ಪೂಜಾರಿಯವರು ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಅಂಗಡಿಬೆಟ್ಟು ನಿವಾಸಿಯಾಗಿದ್ದಾರೆ. ಇವರ ಸೇವೆಗೆ ಜೇಸಿಐ ಅತ್ಯುತ್ತಮ ಯಂಗ್ ಇಂಡಿಯನ್ ಆವಾರ್ಡ್, ಕರ್ನಾಟಕ ಸೇವಾ ಪ್ರತಿಷ್ಠಾನದಿಂದ ಸಾಮಾಜಿಕ ಸೇವಾ ಪುರಸ್ಕಾರ, ಬೆಸ್ಟ್ ಸರ್ಜನ್ ಆವಾರ್ಡ್, ಹಾಗೂ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ಪ್ರಸುತ್ತ ಕರ್ನಾಟಕ ರಾಜ್ಯ ಭಾರತೀಯ ವೈದ್ಯಕೀಯ ಸಂಘದ ಕಾರ್ಯಕಾರಣಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.