ಮೂಡುಬಿದ್ರೆಯಲ್ಲಿ ಅನುಗ್ರಹ ವಿವಿದೋದ್ದೇಶ ಸಹಕಾರ ಸಂಘದ ಉದ್ಘಾಟನೆ- ಅನುಗ್ರಹ ಸಹಕಾರಿ ಸಂಘ ಅತೀ ಕಡಿಮೆ ಅವಧಿಯಲ್ಲಿ ಬಹಳಷ್ಟು ಸಾಧನೆ ಮಾಡಿದೆ: ಡಾ. ಮೋಹನ್ ಆಳ್ವ, ಶಾಖೆಯ ಮುಖಾಂತರ ಲಾಭ ದ್ವಿಗುಣವಾಗಲಿ: ವ.ಫಾ.ವಾಲ್ಟರ್ ಡಿ’ಸೋಜಾ

0

ಉಜಿರೆ: ಮೂಡುಬಿದ್ರೆಯ ಫಾರ್ಚೂನ್ ಹೈವೇ -2 ಮೊದಲನೇ ಮಹಡಿಯಲ್ಲಿ ಸಂಘದ ಕಛೇರಿ ಕಾರ್ಯಚಲಿಸಲಿದ್ದು ಆಶೀರ್ವಚನವನ್ನು ಹೋಲಿ ರೋಜರಿ ಚರ್ಚ್ ಅಲಂಗಾರ್ ಧರ್ಮಗುರುಗಳು ರೆ|ಫಾ|ವಾಲ್ಟರ್ ಡಿಸೋಜ ಇವರು ನೆರವೇರಿಸಿದರು.

ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಉಜಿರೆ ವಲೇರಿಯನ್ ರೊಡ್ರಿಗಸ್ ಅಧ್ಯಕ್ಷತೆ ವಹಿಸಿದರು.ಕಛೇರಿ ಉದ್ಘಾಟನೆಯನ್ನು ಮೂಡಬಿದ್ರೆ ಆಳ್ವಾಸ್‌ ಎಜ್ಯುಕೇಶನ್ ಫೌಂಡೇಶನ್ ಚೇರ್‌ಮೆನ್ ಡಾ।ಎಂ.ಮೋಹನ್ ಆಳ್ವ, ಭದ್ರತಾ ಕೋಶದ ಉದ್ಘಾಟನೆಯನ್ನು ಮೂಡಬಿದ್ರೆ ಪಾರ್ಟ್ನರ್, ಫಾರ್ಚೂನ್ ಪ್ರಮೋಟರ್ಸ್ ಅಬುಲಾಲ್‌ ಪುತ್ತಿಗೆ, ಗಣಕಯಂತ್ರದ ಉದ್ಘಾಟನೆ ಮೂಡಬಿದ್ರೆ ವಲಯದ ಕಥೋಲಿಕ್ ಸಭಾ ಅಧ್ಯಕ್ಷ ಅವಿಲ್‌ ಡಿಸೋಜ ನೆರವೇರಿಸಿದರು.ಉಪಾಧ್ಯಕ್ಷ ಅನಿಲ್‌ ಪ್ರಕಾಶ್‌ ಡಿಸೋಜ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್, ನಿರ್ದೇಶಕರುಗಳಾದ ಸಿಲ್ವೆಸ್ಟ‌ರ್ ಮೋನಿಸ್, ಸುನಿಲ್ ಸಂತೋಷ್ ಮೊರಾಸ್, ಅರುಣ್ ಸಂದೇಶ್ ಡಿಸೋಜ, ಗೀತಾ ಫೆಲ್ಸಿಯಾನ ಡಿಸೋಜ, ಫೆಲಿಕ್ಸ್ ಡಿಸೋಜ, ಆಶಾ ಬೆನೆಡಿಕ್ಟ ಸಲ್ದಾನಾ, ವಲೇರಿಯನ್ ಕ್ರಾಸ್ತಾ, ಮೇಬಲ್ ಫ್ಲಾವಿಯಾ ಲೋಬೊ, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೊಜಾ ಸ್ವಾಗತಿಸಿದರು.ನಿರ್ದೇಶಕಿ ಮೇಬಲ್ ಲೋಬೊ ವಂದಿಸಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಪದವಿ ಪಡೆದ ಜೋಯ್ಸನ್ ಡಿಸೋಜ, ಹೈನುಗಾರಿಕೆಯಲ್ಲಿ ಸಾಧನೆ ಮಾಡಿ ದ. ಕ. ಹಾಲು ಒಕ್ಕೂಟದಲ್ಲಿ ಹಾಲು ಉತ್ಪಾದನೆಯಲ್ಲಿ 2ನೇ ಸ್ಥಾನ ಗಳಿಸಿದ ವಿಮಲಾ ಲಿನೆಟ್ ಗೋನ್ಸಾಲ್ವಿಸ್, ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು.ಉಜಿರೆ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಹೆಸರು ವಾಸಿಯಾದ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 2011 ಇಸವಿಯ ಜೂನ್ ತಿಂಗಳ 6ನೇ ತಾರೀಕಿನಂದು “ಅನುಗ್ರಹ ವಿವಿದೋದ್ದೇಶ ಸಹಕಾರ ಸಂಘ” ಎಂಬ ಹೆಸರಿನಲ್ಲಿ ಉಜಿರೆ ಕಾಲೇಜು ರಸ್ತೆಯ ಬ್ರದರ್ಸ್ ಕಾಂಪ್ಲೆಕ್ಸ್ ಇಲ್ಲಿ ಉದ್ಘಾಟನೆಗೊಂಡಿತು.

230 “ಎ” ವರ್ಗದ ಸದಸ್ಯರಿಂದ ಸಂಗ್ರಹಗೊಂಡ ಕೇವಲ 2.50 ಲಕ್ಷ ಪಾಲು ಭಂಡವಾಳ ಮತ್ತು 20 ಲಕ್ಷ ಠೇವಣಿಯ ಬಲದೊಂದಿಗೆ ಆರಂಭಗೊಂಡ ಈ ಸಂಘವು ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಿತು. ವ್ಯವಹಾರ ಹೆಚ್ಚಾಗುತ್ತಿದ್ದಂತೆ ಸ್ಥಳಾವಕಾಶದ ಕೊರತೆ ಗಮನಿಸಿ ಸಂಘದ ಕಚೇರಿಯನ್ನು 2015 ಜುಲೈ ತಿಂಗಳ 6ನೇ ತಾರೀಕಿನಂದು ಉಜಿರೆ ಶ್ರೀ ಜನಾರ್ಧನ ಸ್ವಾಮೀ ದೇವಸ್ಥಾನದ ಹತ್ತಿರದ ಸಂಕರ್ಷಣಾ ಕಾಂಪ್ಲೆಕ್ಸ್‌ ಇಲ್ಲಿಗೆ ಸುಸಜ್ಜಿತವಾಗಿ ಸ್ಥಳಾಂತರಗೊಳಿಸಲಾಯಿತು.

ಸಂಘದ ವ್ಯವಹಾರವನ್ನು ಗ್ರಾಮೀಣ ಮಟ್ಟದಿಂದ ತಾಲೂಕು ಮಟ್ಟದಲ್ಲಿ ವಿಸ್ತರಿಸುವ ಉದ್ದೇಶದೊಂದಿಗೆ 2020, ಸೆಪ್ಟೆಂಬರ್ 26ರಂದು ಬೆಳ್ತಂಗಡಿಯ ನಗರದ ಸಂತೆಕಟ್ಟೆಯಲ್ಲಿ ಸಂಘದ ಪ್ರಥಮ ಶಾಖೆಯನ್ನು ಆರಂಭಿಸಲಾಯಿತು.ಅದರ ಯಶಸ್ಸನ್ನು ಕಂಡು ಸಂಘದ ಕಾರ್ಯವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವ ಬಗ್ಗೆ ಆಲೋಚನೆ ಮಾಡಿ ಇದೀಗ ಸಂಘದ 2ನೇ ಶಾಖೆ ಮೂಡಬಿದ್ರೆಯಲ್ಲಿ ಶಾಖೆ ಪ್ರಾರಂಭಗೊಂಡಿದೆ.

ಸಂಘದ ಪ್ರಧಾನ ಕಚೇರಿ ಮತ್ತು ಎಲ್ಲಾ ಶಾಖೆಗಳು ಸಂಪೂರ್ಣವಾಗಿ ಗಣಕೀಕೃತಗೊಂಡಿದ್ದು ಸುಭದ್ರ ಭದ್ರತಾ ಕೊಠಡಿಗಳನ್ನು ಒಳಗೊಂಡಿದೆ.

ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಸಂಘದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಉಪಾಧ್ಯಕ್ಷರು ಮತ್ತು ನಿರ್ದೇಶಕರು ಸಂಘದ ಅಭಿವೃದ್ಧಿಯಲ್ಲಿ ಸೇವಾ ಮನೋಭಾವದಿಂದ ಅಧ್ಯಕ್ಷರಿಗೆ ಸಹಕಾರ ನೀಡುತ್ತಿದ್ದಾರೆ.

2023-24ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಸಂಘವು 3224 ಸದಸ್ಯರನ್ನು ಹೊಂದಿದ್ದು 42.75 ಲಕ್ಷ ಪಾಲುಬಂಡವಾಳ ಹಾಗೂ 55 ಕೋಟಿ ದುಡಿಯುವ ಭಂಡವಾಳದ ಮೂಲಕ 195 ಕೋಟಿ ವಾರ್ಷಿಕ ವಹಿವಾಟು ನಡೆಸಿದೆ. 45.50 ಕೋಟಿ ಸಾಲ ನೀಡಲಾಗಿದ್ದು, 1.60ಕೋಟಿ ಲಾಭ ಗಳಿಸಿದೆ. 2022-23ನೇ ಸಾಲಿಗೆ ಶೇಕಡಾ 18 ಡಿವಿಡೆಂಟ್ ವಿತರಿಸಲಾಗಿದೆ. ಸರಕಾರದ ಲೆಕ್ಕಪರಿಶೋಧನೆಯಲ್ಲಿ ಸಂಘವು ಪ್ರತೀ ವರ್ಷ ಎ ಗ್ರೇಡ್ ಹೊಂದಿದೆ.

ಸಂಘದ ಸಾಮಾಜಿಕ ಕಾರ್ಯಕ್ರಮಗಳು: “ಆರೋಗ್ಯವೇ ಭಾಗ್ಯ” ಎಂಬ ನಾಣ್ಣುಡಿಯಂತೆ ಸಂಘದ ಸದಸ್ಯರಿಗೆ ಗಂಭೀರ ಆರೋಗ್ಯ ಸಮಸ್ಯೆಗಳ ಸಂದರ್ಭಗಳಲ್ಲಿ ಧನ ಸಹಾಯವನ್ನು ನೀಡಲಾಗುತ್ತದೆ.ಕಳೆದ ವರ್ಷ ಉಜಿರೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಸಂಘದ ವತಿಯಿಂದ ಬೃಹತ್ ಸಾರ್ವಜನಿಕ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ.ಸದಸ್ಯರ ಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ಸಂಘದ ವತಿಯಿಂದ ಪ್ರತೀ ವರ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.ಇದರಿಂದಾಗಿ ಅನೇಕ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುತ್ತದೆ.ಅಲ್ಲದೆ ಸಂಘವು ವಿವಿಧ ಸಾಮಾಜಿಕ, ಶೈಕ್ಷಣಿಕ ಸಂಸ್ಥೆಗಳಿಗೆ ಸಹಾಯಧನ ನೀಡುತ್ತಾ ಬಂದಿದೆ.

LEAVE A REPLY

Please enter your comment!
Please enter your name here