ವೇಣೂರು: 25 ವರ್ಷಗಳ ಹಿಂದೆ ಉತ್ತಮ ಚಿಂತನೆ ಇಟ್ಟುಕೊಂಡು ಇಲ್ಲಿ ಆರಂಭವಾದ ಸಂಘ ಹೈನುಗಾರರಿಗೆ ಆರ್ಥಿಕ ಶಕ್ತಿಯನ್ನು ನೀಡುತ್ತಾ ಅವರ ಬದುಕನ್ನು ಹಸನುಗೊಳಿಸಿದೆ. ಕೊರೊನಾ ಕಾಲದ ಸಂಕಷ್ಟದಲ್ಲೂ ಹೈನುಗಾರರ ಹಾಲನ್ನು ಖರೀದಿಸಿದ ಜಿಲ್ಲೆಯ ಹಾಲು ಒಕ್ಕೂಟದ ಕಾರ್ಯವನ್ನು ಮೆಚ್ಚಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಪೆರಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಸೆ.24ರಂದು ಜರುಗಿದ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೆರಿಂಜೆ ಪಡ್ಡ್ಯಾರಬೆಟ್ಟ ಕ್ಷೇತ್ರದ ಅನುವಂಶೀಯ ಆಡಳಿತದಾರ ಎ. ಜೀವಂಧರ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಸುಧಾಕರ ಪಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ಯೋಜನಾಧಿಕಾರಿ ಯಶವಂತ ಎಸ್., ದ.ಕ. ಹಾಲು ಒಕ್ಕೂಟದ ನಿರ್ದೇಶಕಿ ಸವಿತಾ ಎನ್. ಶೆಟ್ಟಿ, ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಉಪ ವ್ಯವಸ್ಥಾಪಕ ಡಾ| ಚಂದ್ರಶೇಖರ ಭಟ್, ವಿಸ್ತರಣಾಧಿಕಾರಿ ಸುಚಿತ್ರಾ, ಪೆರಿಂಜೆ ಸಂಘದ ಉಪಾಧ್ಯಕ್ಷ ಆನಂದ ಕುಲಾಲ್, ಕಾರ್ಯದರ್ಶಿ ನಾಗೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿರಂತರ ಹಾಲು ಪೂರೈಕೆ ಮಾಡಿದ ಸದಸ್ಯರಿಗೆ ಹಾಗೂ ಸಂಘದ ಸ್ಥಾಪಕ ಮತ್ತು ಈಗಿರುವ ಆಡಳಿತ ಮಂಡಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಘದ ಫಲಾನುಭವಿ ಸದಸ್ಯರಿಗೆ ಪರಿಹಾರ ಧನ ವಿತರಣೆ ಮಾಡಲಾಯಿತು.
ಸಂಘದ ನಿರ್ದೇಶಕ ವಿಠಲ ಸಿ. ಪೂಜಾರಿ ಸ್ವಾಗತಿಸಿ, ಆನಂದ ಬಂಗೇರ ವಂದಿಸಿದರು. ಅಕ್ಷತಾ ಮತ್ತು ಅಪೂರ್ವ ನಿರೂಪಿಸಿದರು.