ಕಳೆಂಜ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ವಿರುದ್ಧ ಪೊಲೀಸರಿಗೆ ಪ್ರತಿದೂರು ನೀಡಿದ ಗ್ರಾಮಸ್ಥರು

0

ಬೆಳ್ತಂಗಡಿ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ಕಳೆಂಜ ಗ್ರಾಮಸ್ಥರು ಧರ್ಮಸ್ಥಳ ಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದಾರೆ.

ಪುದುವೆಟ್ಟು ಗ್ರಾಮದ ಬೊಳ್ಮನಾರು ನಿವಾಸಿ ಹರೀಶ್ ಕುಮಾರ್ (37) ಏ.23ರಂದು ಕರ್ತವ್ಯಕ್ಕೆ ರಜೆ ಇದ್ದ ದಿನ ಕಳೆಂಜ ಗ್ರಾಮದ ಮಾಣಿಂಗೇರಿ ಹೊಳೆ ಎಂಬಲ್ಲಿ ಜೀಪು ತೊಳೆಯುತ್ತಿದ್ದ ವೇಳೆ ರಾತ್ರಿ 8.30ರ ಸುಮಾರಿಗೆ ಸ್ಥಳೀಯರಾದ ಪ್ರಸನ್ನ, ಅಚ್ಚು, ಶಿವಪ್ಪ, ಉಮೇಶ್ ಗೌಡ ಎಂಬವರು ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈಗ ಈ ಘಟನೆಗೆ ಸಂಬಂಧಿಸಿ ಕಳೆಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಸನ್ನ ಎಂಬವರು ಪ್ರತಿದೂರು ನೀಡಿದ್ದಾರೆ. ಕಳೆಂಜ ಗ್ರಾಮದ ಮಾಣಿಂಗೇರಿ ನಿಡ್ಡಾಜೆ ಎಂಬಲ್ಲಿ ಹೊಸದಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

ಈ ರಸ್ತೆಯಲ್ಲಿ ಬೊಳ್ಮನಾರಿನ ಹರೀಶ್ ಎಂಬಾತ ಮದ್ಯ ಸೇವನೆ ಮಾಡಿ ಜೀಪು ಚಲಾಯಿಸಲು ಯತ್ನಿಸಿದಾಗ ಪ್ರಸನ್ನ, ಶಿವಪ್ಪ ಗೌಡ, ಗಂಗಾಧರ, ಜಗದೀಶ ಎಂಬವರು ತಡೆದಿದ್ದು, ರಸ್ತೆಯಲ್ಲಿ ಜೀಪು ಚಲಾಯಿಸದಂತೆ ವಿನಂತಿಸಿದ್ದಾರೆ. ಆಗ ಹರೀಶ್ ನಿಂದಿಸಿದ್ದು, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

ಶಿವಪ್ಪ ಗೌಡರನ್ನು ಮೋರಿಗೆ ದೂಡಿ ಹಾಕಿ, ಜೀಪಿನಲ್ಲಿದ್ದ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here