ಉಜಿರೆ: ಸಂಘದ ಮೂಲಕ ರಬ್ಬರ್ ಮಾರಾಟ ಮಾಡುವ ಸದಸ್ಯರಿಗೆ ಕೆ.ಜಿ. ಒಂದರ ಒಂದು ರೂ. ಪ್ರೋತ್ಸಾಹ ಧನ ಹಾಗೂ ಸಂಘದಿಂದ ರಬ್ಬರ್ ಕೃಷಿಗೆ ಸಂಬಂಧಪಟ್ಟ ಪರಿಕರಗಳನ್ನು ಖರೀದಿಸುವ ಸದಸ್ಯರಿಗೆ ಶೇ.1 ರಿಯಾಯಿತಿ ನೀಡಲಾಗಿದ್ದು ಇದಕ್ಕೆ ಸುಮಾರು 72 ಲಕ್ಷ ರೂ. ಬಳಕೆಯಾಗಿದ್ದರು, ಸಂಘವು ಕಳೆದ ಸಾಲಿನಲ್ಲಿ 29 ಲಕ್ಷ ರೂ.ಗಿಂತ ಅಧಿಕ ಲಾಭಗಳಿಸಿದೆ ಎಂದು ಉಜಿರೆ ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.
ಅವರು ಜು. 19ರಂದು ಉಜಿರೆ ಕೃಷ್ಣಾನುಗ್ರಹದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 1985ರಲ್ಲಿ ಹಿರಿಯ ಸಹಕಾರಿ ದಿ. ಜಿ. ಎನ್. ಭಿಡೆಯವರ ನೇತೃತ್ವದಲ್ಲಿ ಸ್ಥಾಪನೆಗೊಂಡು ತನ್ನ ವಿಶಿಷ್ಟ ಸಾಧನೆಯ ಮೂಲಕ ಕರ್ನಾಟಕ ರಾಜ್ಯಾದ್ಯಂತ ಹೆಸರು ಗಳಿಸಿ ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಘಗಳಲ್ಲಿ ಒಂದು ಎಂಬ ಹೆಸರು ಗಳಿಸಿರುವ ಸಂಘವು ಕೃಷಿಕರಿಗೆ 40 ವರ್ಷಗಳಿಂದ ಸೇವೆ ನೀಡುತ್ತಿದೆ.
ಸಂಘಕ್ಕೆ ರಬ್ಬರ್ ಮಾರಾಟ ಮಾಡುವ ಸದಸ್ಯರಿಗೆ 5000ರೂ. ಗರಿಷ್ಠ ಮಿತಿಗೊಳಪಟ್ಟು ಕೆಜಿ ಒಂದರ ಒಂದು ರೂ.ನಂತೆ ಪ್ರೋತ್ಸಾಹ ಧನ ನೀಡುವ ಯೋಜನೆ, ಈ ವರ್ಷವೂ ಮುಂದುವರೆಯಲಿದೆ.
ಟ್ಯಾಪರ್ ಗಳ ಕೊರತೆ ಕಂಡು ಬರುತ್ತಿದ್ದು, ಇತರ ಆರ್ ಪಿಎಸ್ ಗಳ ಸಹಕಾರದಲ್ಲಿ ತಾಲೂಕಿಗೆ ಟ್ಯಾಪರ್ ಗಳನ್ನು ಒದಗಿಸಿ ಕೊಡುವ ಕುರಿತು ಮಾತುಕತೆ ನಡೆದಿದೆ. ಬೆಳೆಗೆ ಬೆಲೆ ಕೊಡುವ ನೈತಿಕ ಜವಾಬ್ದಾರಿಯನ್ನು ಸಂಘವು ಹೊಂದಿದ್ದು ನೂತನ ಯೋಜನೆಗಳನ್ನು ರೂಪಿಸಲಿದೆ ಎಂದು ಹೇಳಿದರು.
ಉಪಾಧ್ಯಕ್ಷ ಎಂ.ಅನಂತ ಭಟ್ ಹಾಗೂ ನಿರ್ದೇಶಕರುಗಳಾದ ಜಯಶ್ರೀ ಡಿ. ಎಂ., ಆರ್. ಸುಭಾಷಿಣಿ, ಭೈರಪ್ಪ, ಕೆ. ರಾಮ ನಾಯ್ಕ, ಸೋಮನಾಥ ಬಂಗೇರ, ಪದ್ಮ ಗೌಡ ಹೆಚ್. ಕೆ. ಜೆ. ಆಗಸ್ಟಿನ್, ವಿ. ವಿ. ಅಬ್ರಾಹಂ, ಕೆ. ಬಾಲಕೃಷ್ಣ ಗೌಡ, ಅಬ್ರಾಹಂ ಬಿ. ಎಸ್. ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಜು ಶೆಟ್ಟಿ ಸ್ವಾಗತಿಸಿದರು.