ಧರ್ಮಸ್ಥಳ: ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ 3ರಿಂದ 5ನೇ ತರಗತಿಯ ಮಕ್ಕಳ ಪೋಷಕರ ಸಭೆ ಜರುಗಿತು. ಮುಖ್ಯ ಅತಿಥಿಯಾಗಿ ಚಿತ್ರದುರ್ಗ ಸರಕಾರಿ ಕಾಲೇಜು ಜೀವ ವಿಜ್ಞಾನ ವಿಭಾಗದ ಉಪನ್ಯಾಸಕ ಸುನಿಲ್ ಪಿ. ಜೆ. ಆಗಮಿಸಿ ಇಡೀ ಸಮಾಜದ ಪ್ರಗತಿಗೂ ಪೋಷಕರ ಪಾತ್ರ ಅಪಾರವಾಗಿದೆ. ಅವರು ಸರಿಯಾದ ಮೌಲ್ಯಗಳು, ನೈತಿಕತೆ ಮತ್ತು ಶಿಕ್ಷಣವನ್ನು ಮಕ್ಕಳಲ್ಲಿ ಬಿತ್ತುತ್ತಾರೆ. ಇಂತಹ ಪೋಷಕರೇ ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುತ್ತಾರೆ. ಆದುದರಿಂದ, ನಾವು ಯಾವ ಸ್ಥಾನದಲ್ಲೇ ಇರಲಿ, ನಾವು ನಮ್ಮ ಪೋಷಕರಿಗೆ ಗೌರವವಿತ್ತಂತೆ ನಡೆದುಕೊಳ್ಳೋಣ. ಅವರ ಮಾತು, ಮಾರ್ಗದರ್ಶನ ಮತ್ತು ಅನುಭವಗಳು ನಮ್ಮ ಜೀವನದಲ್ಲಿ ಬೆಳಕಿನ ದಾರಿ ತೋರಿಸುತ್ತವೆ.
ಪೋಷಕರನ್ನು ಪ್ರೀತಿಸಿ, ಗೌರವಿಸಿ ಮತ್ತು ಅವರ ಪ್ರತಿಯೊಂದು ತ್ಯಾಗಕ್ಕೂ ಧನ್ಯವಾದ ಹೇಳೋಣ ಎಂದು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯನಿ ಪರಿಮಳ ಎಂ.ವಿ. ಶಾಲಾ ರೀತಿ ನೀತಿಗಳನ್ನು ವಿವರಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಕ್ಕಳನ್ನು ಸ್ಕೌಟ್ ಗೈಡ್ ದಳಕ್ಕೆ ಸೇರಿಸುವ ಕುರಿತಾಗಿ ಶಾಲೆಯ ಗೈಡ್ ಕ್ಯಾಪ್ಟನ್ ಗೀತಾ ಮಾಹಿತಿ ನೀಡಿದರು. ತರಗತಿ ಶಿಕ್ಷಕರುಗಳು ತಮ್ಮ ಪರಿಚಯವನ್ನು ಪೋಷಕರಿಗೆ ಮಾಡಿದರು. ಶಾಲಾ ಶಿಕ್ಷಕಿ ಸತ್ಯವತಿ ನಿರೂಪಿಸಿ, ಜಯವತಿ ವಂದಿಸಿದರು.