ಗರ್ಡಾಡಿ: ಕಥೋಲಿಕ್ ಸಭೆಯಿಂದ ವನಮಹೋತ್ಸವ ಹಾಗೂ ಕೃಷಿ ಮಾಹಿತಿ ಕಾರ್ಯಕ್ರಮವನ್ನು ಜು. 3ರಂದು ಆಯೋಜಿಸಲಾಯಿತು.
ನಂತರ ಸಮಾರಂಭದಲ್ಲಿ ಗರ್ಡಾಡಿ ಚರ್ಚ್ ಧರ್ಮಗುರು ಫಾ. ಸುದೀಪ್ ಸಂತಾನ್ ಗೊನ್ಸಾಲ್ವೀಸ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ತಮ್ಮ ಸಂದೇಶದಲ್ಲಿ ತಿಳಿಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಬಂದಂತಹ ಮಂಗಳೂರಿನ ಕೃಷಿ ಇಲಾಖೆಯ ಜೋ ಪ್ರದೀಪ್ ಡಿಸೋಜ ಅವರು ಅಡಿಕೆಯ ವಿವಿಧ ತಳಿಗಳು, ಅಡಿಕೆ ಬೆಳೆಯನ್ನು ಬೆಳೆಯಲು ಬೇಕಾದ ಬೀಜದ ಆಯ್ಕೆ, ಬೇಕಾದ ಮಣ್ಣು, ಬೆಳೆಯುವ ರೀತಿ, ಅದಕ್ಕೆ ಬೇಕಾಗುವ ಪೋಷಕಾಂಶಗಳು, ಅದಕ್ಕೆ ಬರುವ ವಿವಿಧ ರೋಗಗಳು ಹಾಗೂ ಔಷಧಿ ಸಿಂಪರಣೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಬೆಳ್ತಂಗಡಿ ಪ್ರಾಂತ್ಯದ ಕಥೋಲಿಕ್ ಸಭೆಯ ಅಧ್ಯಕ್ಷರಾಗಿ ಗರ್ಡಾಡಿಯಿಂದ ಆಯ್ಕೆಯಾದ ಆಲ್ಬರ್ಟ್ ಸುನಿಲ್ ಮೋನಿಸ್ ಅವರನ್ನು ಚರ್ಚ್ ನಿಂದ ಧರ್ಮಗುರು ಫಾ. ಸುದೀಪ್ ಸಂತಾನ್ ಗೊನ್ಸಾಲ್ವೀಸ್ ಅವರು ಶಾಲು ಹೊದಿಸಿ ಹಾಗೂ ಚರ್ಚ್ ಪಾಲನಾ ಮಂಡಳಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹೂಗುಚ್ಛ ನೀಡಿ ಸನ್ಮಾನಿಸಿದರು.

ಗರ್ಡಾಡಿ ಕಥೋಲಿಕ್ ಸಭೆಯ ಅಧ್ಯಕ್ಷ ಆಲ್ವಿನ್ ಮೋನಿಸ್ ಸ್ವಾಗತಿಸಿದರು. ಚರ್ಚ್ ಪಾಲನಾ ಮಂಡಳಿಯ ಅಧ್ಯಕ್ಷ ಹೆರಾಲ್ಡ್ ಮೋನಿಸ್, ಕ್ಯಾಥೋಲಿಕ್ ಸಭಾ ಸೆಂಟ್ರಲ್ ಸಮಿತಿ ಉಪಾಧ್ಯಕ್ಷ ಲಿಯೋ ರೋಡ್ರಿಗಸ್, ಬೆಳ್ತಂಗಡಿ ಪ್ರಾಂತ್ಯದ ಕಥೋಲಿಕ್ ಸಭೆಯ ಅಧ್ಯಕ್ಷ ಆಲ್ಬರ್ಟ್ ಸುನಿಲ್ ಮೋನಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಥೋಲಿಕ್ ಸಭೆಯ ಸದಸ್ಯರಾದ ಮೆಲ್ವಿನ್ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಅನಂತರ ಸಾಂಕೇತಿಕವಾಗಿ ಎಲ್ಲರೂ ಜೊತೆಗೂಡಿ ಗಿಡ ನೆಟ್ಟು, ವಿವಿಧ ರೀತಿಯ ಗಿಡಗಳನ್ನು ಹಂಚಲಾಯಿತು. ಕಥೋಲಿಕ್ ಸಭೆಯ ಕಾರ್ಯದರ್ಶಿ ಸ್ಟೀವನ್ ಮೋನಿಸ್ ಧನ್ಯವಾದವಿತ್ತರು.