




ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ಕನ್ಯಾನ ಕೆಪಿಎಸ್ ಪ್ರೌಢಶಾಲಾ ವಿಭಾಗದಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ಸಾಮಾಜಿಕ ಪರಿಶೋಧನಾ ಪೋಷಕರ ಸಭೆ ಡಿ. 6ರಂದು ನಡೆಯಿತು. ಸಭಾಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಡಿಸೋಜಾ ಅವರು ವಹಿಸಿದ್ದರು. ಅವರು ತಮ್ಮ ಮಾತಿನಲ್ಲಿ ಸ್ವಚ್ಛತೆ ಬಗ್ಗೆ ಇನ್ನಷ್ಟು ಗಮನಹರಿಸುವಂತೆ ಹಾಗೂ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ಪ್ರಯೋಜನವನ್ನು ಮಕ್ಕಳು ಇನ್ನಷ್ಟು ಉತ್ತಮ ರೀತಿಯಲ್ಲಿ ಪಡೆದುಕೊಳ್ಳುವಂತಾಗಲಿ ಎಂದು ತಿಳಿಸಿದರು.


ಪರಿಶೋಧನಾ ಪ್ರಕ್ರಿಯೆ ಭಾಗವಾದ ದಾಖಲಾತಿಗಳ ಪರಿಶೀಲನೆ, ಭೌತಿಕ ಪರಿಶೀಲನೆ ಹಾಗೂ ಪೋಷಕರ ಮನೆ ಭೇಟಿಯ ಕುರಿತಾದ ಮಾಹಿತಿ ಸಂಗ್ರಹಣೆಯನ್ನು ಮಾಡಿ ವರದಿ ಮಂಡನೆ ಮಾಡಲಾಯಿತು. ಇದಕ್ಕೆ ಪೂರಕವಾಗಿ ಪೋಷಕರೊಂದಿಗೆ ಚರ್ಚೆ ನಡೆಸಿ ಅವರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆದುಕೊಳ್ಳಲಾಯಿತು. ಸಭೆಯಲ್ಲಿ ಉಪಪ್ರಾಂಶುಪಾಲೆ ವಿನುತಾ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಜಯಲಕ್ಷ್ಮಿ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ರಾಜಶ್ರೀ ಮತ್ತು ಮೇಘನಾ ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕರು, ಶಿಕ್ಷಕರು ಶಾಲಾ ಮಕ್ಕಳೊಂದಿಗೆ ಉಪಸ್ಥಿತರಿದ್ದರು.









