ಕೊಕ್ಕಡ: ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ ಕಾವು ತ್ರಿಗುಣಾತ್ಮಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಸ್ಥಾನದ ಸಾನಿಧ್ಯ ವೃದ್ಧಿ ಹಾಗೂ ಲೋಕಕಲ್ಯಾಣಕ್ಕಾಗಿ ನವಚಂಡಿಕಾಯಾಗ ಭಕ್ತಿಭಾವಪೂರ್ಣವಾಗಿ ನೆರವೇರಿತು.
ಈ ಮಹಾಯಾಗವನ್ನು ಕೊಡೆಂಕರಿ ಎನ್.ಈಶ್ವರ್ ಭಟ್ ಹಾಗೂ ಮಕ್ಕಳು ಅವರ ಸೇವಾರ್ಥವಾಗಿ, ದರ್ಬೆತಡ್ಕ ಅಂಶುಮಾನ್ ಅಭ್ಯಂಕರ್, ಸುಹಾಸ್ ಮೆಹಂದಳೆ ಹಾಗೂ ಅವಿನಾಶ್ ಅವರ ತಂಡದ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಯಾಗದಲ್ಲಿ 10 ಸೇರು ಬೆಳ್ತಿಗೆ ಅಕ್ಕಿ, 1 ಕೆಜಿ ಎಳ್ಳು, 4 ಕೆಜಿ ತುಪ್ಪ, ದ್ರಾಕ್ಷಿ, ಗೋಡಂಬಿ, ಗರಿಕೆ, ಅಡಕೆಹೂಳು ಹಾಗೂ ಪಾಲಸಸಮಿತುನಿಂದ ತಯಾರಿಸಿದ ಪಾಯಸವನ್ನು ಹೋಮಕುಂಡದಲ್ಲಿ ಸಮರ್ಪಿಸಲಾಯಿತು. ಯಾಜಕ ತಂಡವು 700 ಮಂತ್ರಪಠಣದೊಂದಿಗೆ 700 ಆಹುತಿಗಳನ್ನು ಅರ್ಪಿಸಿದ್ದು, 13 ಅಧ್ಯಯನಗಳ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ವಿಶಿಷ್ಟ ವಸ್ತುಗಳ ಆಹುತಿಗಳು ಸಲ್ಲಿಸಲಾಯಿತು.
ದೇವಸ್ಥಾನದ ಆಡಳಿತ ಟ್ರಸ್ಟ್ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಪೂವಾಜೆ, ಪವಿತ್ರಪಾಣಿ ಸೂರ್ಯನಾರಾಯಣ ಯಡಪಡಿತ್ತಾಯ, ದೇವಸ್ಥಾನದ ಅರ್ಚಕ ಮಂಜುನಾಥ ಭಟ್ ಹಾಗೂ ತಂಡ, ನವರಾತ್ರಿ ನಿರ್ವಹಣಾ ಸಮಿತಿ ಅಧ್ಯಕ್ಷ ದೇವರಾಜ್ ಹೊಸಹೊಕ್ಲು ಮತ್ತು ಸದಸ್ಯರು, ದುರ್ಗಾವಾಹಿನಿ ಮಹಿಳಾ ತಂಡದ ಅಧ್ಯಕ್ಷೆ ಶಶಿಕಲಾ ಹಾಗೂ ಸದಸ್ಯರು, ಕಾವು ಯುವಕೇಸರಿ ಅಧ್ಯಕ್ಷ ರಘು ಗೌಡ ಹಾಗೂ ಸದಸ್ಯರು, ದೇವಸ್ಥಾನ ಆಡಳಿತ ಟ್ರಸ್ಟ್ನ ಕೋಶಾಧಿಕಾರಿ ಡಾ.ಗಣೇಶ್ ಪ್ರಸಾದ್, ಸದಸ್ಯರು ಜನಾರ್ಧನ ಮೂಡುಬೈಲು, ಜಿನ್ನಪ್ಪ ಗೌಡ ಸೇರಿದಂತೆ ಗ್ರಾಮದ ಭಕ್ತಾದಿಗಳು ಭಾಗವಹಿಸಿ ಯಾಗದಲ್ಲಿ ಸಾಕ್ಷಿಗಳಾದರು.