ಬೆಳ್ತಂಗಡಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಚಕೋರ ಸಾಹಿತ್ಯ ವಿಚಾರ ವೇದಿಕೆ ದಕ್ಷಿಣ ಕನ್ನಡ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಗೊರೂರು ಕಂಡ ಗಾಂಧಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಮತ್ತು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಆಗಮಿಸಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ತದನಂತರ ಮಾತನಾಡಿದ ಇವರು ಗಾಂಧಿ ಅವರ ಕುರಿತು ಮಾತನಾಡುತ್ತಾ ಯಾರು ಎಷ್ಟೇ ತಪ್ಪು ಮಾಡಿದರು, ಎದೆಗೆ ಒದ್ದರೂ ಅವರು ತಾಯಿಯಂತೆ ಎಲ್ಲರನ್ನು ಕ್ಷಮಿಸಿ ಬಿಡುತ್ತಿದ್ದರು. ಅವರನ್ನು ಎಷ್ಟೇ ದೂರವಿರಿಸಲು ಪ್ರಯತ್ನಿಸಿದರು ಎಲ್ಲರ ಹೃದಯದಲ್ಲಿ ನೆಲೆ ನಿಂತಿರುತ್ತಾರೆ. ಎಂಬಿತ್ಯಾದಿ ಹಲವಾರು ವಿಚಾರಗಳನ್ನು ಉದಾಹರಣೆಗಳ ಸಹಿತ ವಿವರಿಸಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಪನ್ಯಾಸಕ ಡಾ. ರಾಜಶೇಖರ್ ಹಳೆಮನೆಯವರು ಗಾಂಧೀಜಿ ಹಾಗೂ ಧರ್ಮ,ಗಾಂಧಿ ಕಂಡ ಭಗವಂತ ಯಾರು? ಅಸ್ಪರ್ಶತೆ ಆಚರಣೆಯ ವಿರುದ್ಧ ಗಾಂಧಿಯ ನಡೆ, ಮಹಿಳಾ ಸ್ವಾವಲಂಬನೆಯಲ್ಲಿ ಗಾಂಧಿಯ ನಡೆ , ದೇಶಕ್ಕೆ ಗಾಂಧಿ ಹಾಗೂ ಅಂಬೇಡ್ಕರ್ ರವರು ಎರಡು ಕಣ್ಣುಗಳು, ಹೀಗೆ ಗಾಂಧಿಯ ಸರಳ ಜೀವನ ಶೈಲಿ ಹಾಗೂ ಮಾದರಿ ಜೀವನ ಶೈಲಿಯ ಕುರಿತಾಗಿ ಗೊರೂರು ಅವರ ದೃಷ್ಟಿ ಹೇಗಿತ್ತು ಎಂಬುದನ್ನು ಸವಿವರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಸುರೇಶ್ ವಿ. ಅಧ್ಯಕ್ಷೀಯ ನುಡಿಯಲ್ಲಿ ಮಾತನಾಡುತ್ತಾ ಯುವ ಪೀಳಿಗೆ ಗಾಂಧಿಯವರ ಉತ್ತಮ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು, ಈ ಕುರಿತಾಗಿ ಅನೇಕ ಸಂಶೋಧನಾ ಕೃತಿಗಳನ್ನು ರಚಿಸಲು ಪ್ರಯತ್ನಿಸಬೇಕು ಎಂಬಿತ್ಯಾದಿ ವಿಚಾರಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಚಕೋರಿ ಇದರ ಸಂಚಾಲಕ ಸುಜಿತ್ , ಕನ್ನಡ ಉಪನ್ಯಾಸಕ ಪ್ರೊಫೆಸರ್ ಮಾರುತಿ ಜಿ., ಪ್ರೊಫೆಸರ್ ಸುಧಾರಾಣಿ ಎನ್. ಉಪಸ್ಥಿತರಿದ್ದರು. ಪ್ರೊಫೆಸರ್ ಮಾರುತಿ ಜಿ. ಸ್ವಾಗತಿಸಿ ಪ್ರೊಫೆಸರ್ ಸುಧಾರಾಣಿ ಎನ್. ಧನ್ಯವಾದವಿತ್ತರು. ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.