ನಾರಾವಿ: ಗ್ರಾಮ ಪಂಚಾಯತಿಗೆ ಸೆ.4ರಂದು ವಿಧಾನ ಪರಿಷತ್ತಿನ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಭೇಟಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಚರ್ಚಿಸಿ ಪರಿಶೀಲಿಸಿದರು.
ಕೇಂದ್ರ ಸರ್ಕಾರದ MGNREGA, ಪ್ರಧಾನ ಮಂತ್ರಿ ಆವಾಸ್ ಯೋಜನೆ, 15ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್ (SBM) ಮತ್ತು ರಾಜ್ಯ ಸರ್ಕಾರದ ಬಸವ ವಸತಿ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಗಳ ಕಾರ್ಯಗತೀಕರಣದ ಬಗ್ಗೆ ಮಾಹಿತಿ ಪಡೆದು ಅವುಗಳ ಅನುಷ್ಠಾನ ಕುರಿತು ಮಾರ್ಗದರ್ಶನ ನೀಡಿದರು.
ಇದಲ್ಲದೆ, ಏಕ ನಿವೇಶನ ವಿನ್ಯಾಸ ಅನುಮೋದನೆ, ಕಟ್ಟಡ ನಕ್ಷೆ ಅನುಮೋದನೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಗಳಲ್ಲಿ ಎದುರಾಗುತ್ತಿರುವ ಅಡಚಣೆಗಳು ಸೇರಿದಂತೆ ಸ್ಥಳೀಯ ಆಡಳಿತ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲಾಯಿತು.
ನಾರಾವಿ ಗ್ರಾಮ ಪಂಚಾಯತಿಯು ಸ್ವಂತ ಆದಾಯ ಹೆಚ್ಚಿಸಲು ಕೈಗೊಂಡ ಕ್ರಮಗಳು, ಉತ್ತಮ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಆಡಳಿತ ಮಂಡಳಿಯ ತೊಡಗಿಸಿ ಕೊಳ್ಳುವಿಕೆಯ ಕಾರ್ಯವೈಖರಿ ಬಗ್ಗೆ ಶಾಸಕರು ಸಂತೋಷ ವ್ಯಕ್ತಪಡಿಸಿ ಪ್ರಶಂಸಿಸಿದರು.