
ಬೆಳ್ತಂಗಡಿ: ಜಗತ್ತಿಗೆ ಶ್ರೀ ಕೃಷ್ಣ ಸಾರಿದ ಸಂದೇಶಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ ಅಭಿಪ್ರಾಯಪಟ್ಟರು.
ಅವರು ಲಾಯಿಲ ಪಡ್ಲಾಡಿ ಶಾಲಾ ವಠಾರದಲ್ಲಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪಡ್ಲಾಡಿ ಲಾಯಿಲ ಇದರ ಆಶ್ರಯದಲ್ಲಿ ನಡೆದ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀ ಕೃಷ್ಣ ಜಗತ್ತಿಗೆ ಸಾರಿದ ಸಂದೇಶಗಳನ್ನು ಪ್ರಸ್ತುತ ಈಗಿನ ಯುವ ಜನತೆ ತಿಳಿದು ಕೊಳ್ಳುವ ಅಗತ್ಯತೆ ಇರುವುದರಿಂದ ಸರ್ಕಾರಗಳು ಪಠ್ಯದಲ್ಲಿ ಇದನ್ನು ಸೇರಿಸುವ ಕೆಲಸ ಮಾಡಬೇಕಾಗಿದೆ ಎಂದರು.ಕೃಷ್ಣ ಜನ್ಮಾಷ್ಟಮಿ ಹಿಂದೂಗಳ ಪ್ರಮುಖ ಹಬ್ಬವಾಗಿದ್ದರೂ ,ಇವತ್ತು ಎಲ್ಲ ಸಮುದಾಯದವರು ಒಟ್ಟಾಗಿ ಸೇರಿಕೊಂಡು ಸೌಹರ್ದತೆಯಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರುತ್ತಿರುವ ಹಬ್ಬವಾಗಿದೆ.ಅಶಕ್ತ ಬಡ ಕುಟುಂಬಗಳನ್ನು ಗುರುತಿಸಿ ಆರ್ಥಿಕ ಸಹಾಯ, ಆಹಾರ ಕಿಟ್ ವಿತರಣೆ, ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಮತ್ತಷ್ಟು ಅರ್ಥಪೂರ್ಣವಾಗಿ ಈ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಕೆಲಸ ಎಂದರು. ಕಾರ್ಯಕ್ರಮದಲ್ಲಿ 13 ಮಂದಿ ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಲಾಯಿತು.
ವಿಶೇಷ ಸಾಧನೆಗೈದ ಶ್ರದ್ಧಾ ಶೆಟ್ಟಿ ಎಣಿಂಜೆ, ಹಿರಿಯ ನಾಟಿ ವೈದ್ಯೆ ಗುಲಾಬಿ ಸಿದ್ದು ದೇವಾಡಿಗ ಅವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷ ವಿನಯ್ ಎಂ.ಎಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ.ಹಿ.ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಮತಾ, ಅಂಬೇಡ್ಕರ್ ಭವನ ಉಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ್ ಎಲ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಬಾರಿ ಚೆನ್ನೆಮಣೆ ಆಟ ಎಲ್ಲರ ಗಮನ ಸೆಳೆಯಿತು. ಬೆಳಿಗ್ಗೆ ಆನಂದ ಪೂಜಾರಿ, ನಿನ್ನಿಕಲ್ಲು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಹಾಲು ಉತ್ಪಾದಕರ ಸಂಘ ಪಡ್ಲಾಡಿ ಅಧ್ಯಕ್ಷ ವಿಶ್ವೇಶ್ವರಯ್ಯ ಭಟ್, ಉತ್ಸಾಹಿ ಯುವಕ ಮಂಡಲ ಅಧ್ಯಕ್ಷ ಹರ್ಷಿತ್ ಎಲ್. ರೇಷ್ಮಾ ರೋಸ್ಲಿನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಂಜೆಯವರೆಗೆ ಮಕ್ಕಳಿಗೆ ಪುರುಷರಿಗೆ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ದೆಗಳು ನಡೆಯಿತು. ಮಳೆಯಲ್ಲೂ ಗ್ರಾಮಸ್ಥರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಗೌರವಾಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಪ್ರಸ್ತಾವಿಸಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ವರುಣ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ದಿನಕರ್ ದೇವೊಟ್ಟು, ಕೋಶಾಧಿಕಾರಿ ರಾಜೇಶ್ ಅಂಕಾಜೆ, ಜೊತೆ ಕೋಶಾಧಿಕಾರಿ ಪವನ್, ನಿಕಟಪೂರ್ವ ಅಧ್ಯಕ್ಷ ರವಿಚಂದ್ರ ನಾಡೆಂಜ, ಅನಿಲ್, ಸಂತೋಷ್ ಹಿಮರಡ್ಡ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.