ಬೆಳಾಲು: ಶ್ರೀ ಧ. ಮಂ. ಅನುದಾನಿತ ಪ್ರೌಢಶಾಲೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಉಪನ್ಯಾಸ ಮಾಲೆ – 2ರ ಕಾರ್ಯಕ್ರಮದಲ್ಲಿ ವರಕವಿ ಬೇಂದ್ರೆಯವರ ಕುರಿತು ಉಪನ್ಯಾಸ ಜರಗಿತು.
ದೀಪ ಬೆಳಗಿಸಿ, ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಧ. ಮಂ. ಪದವಿ ಕಾಲೇಜು ಉಜಿರೆಯ ಸಹಾಯಕ ಪ್ರಾಧ್ಯಾಪಕ ಡಾ. ನಾಗಣ್ಣ ಡಿ.ಎ. ಮಾತನಾಡಿ ಬೇಂದ್ರೆ ಅವರು ಆಡು ಮಾತಿನ ಶೈಲಿಯಲ್ಲಿ ಕವನಗಳನ್ನು ರಚಿಸಿ ಜನಜನಿತರಾದವರು, ಸರಳ ಜೀವನ, ವ್ಯಕ್ತಿತ್ವದಿಂದ ಶ್ರೇಷ್ಠತೆಯನ್ನು ಪಡೆದುಕೊಂಡವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ ಮಾತನಾಡಿ ಸಾಹಿತ್ಯಾಸಕ್ತಿ ಮತ್ತು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಜ್ಞಾನಶಕ್ತಿ ವಿಸ್ತರಿಸಲು ಸಾಧ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಇಂತಹ ಕಾರ್ಯಕ್ರಮದಿಂದ ಸಾಹಿತ್ಯದ ಕಂಪು ಎಲ್ಲೆಡೆ ಪಸರಿಸಲಿ ಎಂದರು. ವಿದ್ಯಾರ್ಥಿಗಳು ಬೇಂದ್ರೆಯವರ ಭಾವಗೀತೆಗಳನ್ನು ಹಾಡಿದರು.
ಶಿಕ್ಷಕರಾದ ಕಿರಣ್ ಸ್ವಾಗತಿಸಿ, ಸುಮನ್ ಯು. ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಐಶ್ವರ್ಯ ವಂದಿಸಿದರು.