ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರು ದೆಹಲಿ ತುಳುವ ಮಹಾಸಭೆಯ ಸಂಚಾಲಕರಾಗಿ ನೇಮಕ

0

ಬೆಳ್ತಂಗಡಿ: ತುಳು ಭಾಷೆ, ಸಂಸ್ಕೃತಿ, ಮತ್ತು ಸಮುದಾಯ ಹಕ್ಕುಗಳ ರಕ್ಷಣೆಗೆ ಶತಮಾನಾಂತರದಿಂದ ಶ್ರಮಿಸುತ್ತಿರುವ ತುಳುವ ಮಹಾಸಭೆ, ನವದೆಹಲಿ ಘಟಕದ ಸಂಚಾಲಕರಾಗಿ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ನೂತನ ನೇಮಕದಿಂದ ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸುವ ಹೋರಾಟಕ್ಕೆ ಹೊಸ ಶಕ್ತಿ ತುಂಬಲಿದೆ ಎಂದು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ತುಳು ಸಂಘಟನೆಗಳು ಈ ನೇಮಕಾತಿಯನ್ನು ಸ್ವಾಗತಿಸಿದೆ.

ತುಳುವ ಮಹಾಸಭೆ, 1928ರಲ್ಲಿ ಹಿರಿಯ ತಿಲಕವಾದಿ ಎಸ್. ಯು. ಪಣಿಯಾಡಿ ಅವರ ನೇತೃತ್ವದಲ್ಲಿ ಸ್ಥಾಪಿತವಾದ ಈ ಸಂಘಟನೆ, ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ತುಳುವರ ಹಕ್ಕುಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಶ್ರಮಿಸುತ್ತಿದೆ. ಶತಮಾನೋತ್ಸವದ ಹೆಜ್ಜೆಯಲ್ಲಿ ಈ ಸಂಸ್ಥೆ ತುಳುನಾಡನ ಕಳರಿ ತರಬೇತಿ (ಸಮರಕಲೆ, ಮರ್ಮ ಚಿಕಿತ್ಸಾ ಪಾಠ), ನಶಿಸುತ್ತಿರುವ ದೈವ ಆರಾಧನೆಗಳ ಪುನರುಜ್ಜೀವನ, ತುಳುವೇಶ್ವರ ದೇವಾಲಯ ಪುನರ್ ಸ್ಥಾಪನೆ, ಭಾಷಾ–ಮತ–ಜಾತಿ ಸೌಹಾರ್ದತೆ, ಪರಿಸರ ಸಂರಕ್ಷಣೆ ಮುಂತಾದ ಹತ್ತು ಹಾದಿಗಳಲ್ಲಿ ಕಾರ್ಯವ್ಯಾಪ್ತಿ ವಿಸ್ತರಿಸುತ್ತಿದೆ.

ಪ್ರಕಾಶ್ ಶೆಟ್ಟಿ ಉಳೆಪಾಡಿಯವರು ಕಲೆ, ಸಾಹಿತ್ಯ, ವಾಗ್ಮಿತ್ವ, ಮಾಧ್ಯಮ, ಶಿಕ್ಷಣ ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ತುಳು ಭಾಷೆಯಲ್ಲಿ ಕಥೆ, ಕವನ, ನಾಟಕಗಳನ್ನು ರಚಿಸುವಲ್ಲಿಯೂ, ಉದಯವಾಣಿ, ವಿಜಯ ಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಹೊಸ ದಿಗಂತ, ಕರ್ನಾಟಕ ಮಲ್ಲ ಮುಂತಾದ ಪತ್ರಿಕೆಗಳಲ್ಲಿ ಲೇಖನ ಬರೆಯುವಲ್ಲಿಯೂ ಸಕ್ರಿಯರಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ಪದವೀಧರರಾದ ಅವರು, ಆಳ್ವಾಸ್ ಕಾಲೇಜು (ಮೂಡುಬಿದಿರೆ), ಪಾಂಪೈ ಕಾಲೇಜು (ಐಕಳ), ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರು, ಉಡುಪಿ, ಶಿವಮೊಗ್ಗ, ದಾವಣಗೆರೆ ಮೊದಲಾದ ನಗರಗಳಲ್ಲಿ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗ್ರಾಮೀಣ ಡಿಜಿಟಲ್ ಸಾಮರ್ಥ್ಯವನ್ನು ಬಲಪಡಿಸಿದ್ದಾರೆ.

ಇತ್ತೀಚಿನ 18 ವರ್ಷಗಳಿಂದ ದೆಹಲಿಯಲ್ಲಿ ವೃತ್ತಿಪರವಾಗಿ ನೆಲೆಸಿರುವ ಅವರು, ಈಗ ಟ್ರೇಡ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾದ ಕಲಾ ವಿಭಾಗದಲ್ಲಿ ಹಿರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ಲಾನ್‌ಮ್ಯಾನ್ ಮೀಡಿಯಾ, ಡ್ರೀಮ್‌ವರ್ಕ್ಸ್ ಮೀಡಿಯಾ, ಟಿಸಿಜಿ ಮೀಡಿಯಾ, ಮ್ಯಾಕ್ಸ್‌ಪೋಶರ್ ಮೀಡಿಯಾ, ಮತ್ತು The Sunday Indian ವಾರಪತ್ರಿಕೆಯಲ್ಲಿ ಅವರ ಪಾತ್ರಗಳು ಮಾಧ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಕಲ್ಪಿಸಿವೆ. 2004ರಲ್ಲಿಯೇ ಅವರು ಸ್ಥಾಪಿಸಿದ ಪ್ರಕಾಶಕ ಡಾಟ್ ಕಾಂ ಎಂಬ ವೆಬ್‌ಸೈಟ್ ತುಳು–ಕನ್ನಡದ ಸುದ್ದಿಗಳಿಗೆ ವೇದಿಕೆಯಾಗಿದ್ದು, ತುಳು ಚಾನಲ್ ( youtube.com/@TuluChannel ) ಯೂಟ್ಯೂಬ್ ಚಾನೆಲ್‌ ಮೂಲಕ ತುಳು ಭಾಷಾ ಪರಂಪರೆಯ ಜಾಗತಿಕ ಪ್ರಸಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ದೆಹಲಿಯ ಕರ್ನಾಟಕ ಸಂಘದ ಸಕ್ರಿಯ ಸದಸ್ಯರು, ತುಳು ಸಿರಿ ಸಂಘಟನೆಯ ಜೊತೆ ಕಾರ್ಯದರ್ಶಿ ಎಂಬ ಹುದ್ದೆಗಳ ಮೂಲಕ ತುಳು–ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಈ ನೈಜ ಸೇವಾ ಮನೋಭಾವನೆ ಹಾಗೂ ಸಂಘಟನಾ ಕೌಶಲ್ಯಗಳು ಅವರ ನೇಮಕಕ್ಕೆ ಪೂರಕವಾದ ಮಹತ್ವದ ಅಂಶಗಳಾಗಿವೆ.

ಪ್ರಕಾಶ್ ಶೆಟ್ಟಿಯವರ ನೇತೃತ್ವದಲ್ಲಿ ದೆಹಲಿಯಲ್ಲಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಅಭಿಯಾನ ಇನ್ನಷ್ಟು ಗಂಭೀರವಾಗಿ ನಡೆಯಲಿದೆ. ಜೊತೆಗೆ ಯುವ ಸಮುದಾಯದಲ್ಲಿ ಭಾಷಾ ಪ್ರೇಮ ಮತ್ತು ಸಂಸ್ಕೃತಿಯ ಅರಿವು ಮೂಡಿಸಲು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ರೂಪುಗೊಳ್ಳಲಿವೆ ಎಂದು ಮಹಾಸಭೆಯ ಕೇಂದ್ರ ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here