ಶಿಶಿಲ: ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಸುದ್ದಿ ನ್ಯೂಸ್ ಜೊತೆ ಮಾತನಾಡಿ ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಬೆಳ್ತಂಗಡಿ ತಾಲೂಕಿನ ಶಿಶಿಲದ ಶಿಶಿಲೇಶ್ವರ ದೇವಸ್ಥಾನಕ್ಕೆ ಕಳೆದ ಎರಡು ವರ್ಷಗಳಿಂದ ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡದೆ ದೇವಸ್ಥಾನ ದೈನಂದಿನ ಪೂಜಾ ಕಾರ್ಯಗಳಿಗೆ ಹಾಗೂ ವಾರ್ಷಿಕ ಆಚರಣೆಗಳನ್ನು ಮಾಡಲು ಅಡಚಣೆಯಾಗಿದೆ. ಸರಕಾರವು ದೇವಸ್ಥಾನದ ವಿಷಯದಲ್ಲಿ ರಾಜಕೀಯವನ್ನು ಮಾಡದೆ ಸ್ಥಳೀಯ ಭಕ್ತರ ಸಭೆಯನ್ನು ಕರೆದು ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡಬೇಕು.
ಈ ದೇವಸ್ಥಾನವು ಮತ್ಸ್ಯ ಸಂಕುಲಕ್ಕೆ ಪ್ರಸಿದ್ಧಿಯಾಗಿದ್ದು, ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಜೂ.25ರಂದು ಸುರಿದ ಭಾರೀ ಮಳೆಗೆ ದೇವಸ್ಥಾನದ ಆವರಣ ಗೋಡೆ ಹಾಗೂ ದೇವಸ್ಥಾನಕ್ಕೆ ಹೋಗುವ ರಸ್ತೆಗಳಿಗೆ ಹಾನಿಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸರಕಾರವು ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡದೆ ದೇವಸ್ಥಾನದ ತುರ್ತು ಕಾರ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಆದ್ದರಿಂದ ಸ್ಥಳೀಯ ಹಿಂದೂ ಸಮಾಜದ ಭಕ್ತರ ಸಭೆಯನ್ನು ಕರೆದು ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.