ಪಟ್ರಮೆ: ಯಕ್ಷದ್ರುವ ಪಟ್ಲ ಫೌಂಡೇಶನ್ ವತಿಯಿಂದ ಅನಾರು ಸ. ಉ. ಶಾಲೆಯಲ್ಲಿ ಜೂ.25ರಂದು ಎರಡನೇ ವರ್ಷದ ಯಕ್ಷಗಾನ ನಾಟ್ಯ ತರಗತಿ ಶುಭಾರಂಭಗೊಂಡಿತು.
ಗ್ರಾಮದ ಹಿರಿಯ ಯಕ್ಷಗಾನ ಕಲಾವಿದ ನಿರಂಜನ್ ಜೈನ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂತಹ ಹಳ್ಳಿಯ ಸ. ಶಾಲೆಯಲ್ಲಿ ಈ ರೀತಿ ಉಚಿತವಾಗಿ ಮಕ್ಕಳಿಗೆ ಯಕ್ಷಗಾನ ಕಲಿಸುವ ಪಟ್ಲ ಫೌಂಡೇಶನ್ ನ ಶ್ರಮ ಶ್ಲಾಘನೀಯ. ಅವರ ಈ ಪರಿಶ್ರಮವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮಕ್ಕಳು, ಪೋಷಕರು ಮುಂದಾಗಬೇಕು, ಆ ಮೂಲಕ ಯಕ್ಷಗಾನಕ್ಕೆ, ಸಂಸ್ಥೆಗೆ, ಶಾಲೆಗೆ ಹೆಸರು ತರಬೇಕು ಎಂದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಧನಂಜಯ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಈ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಯಕ್ಷದ್ರುವ ಟ್ರಸ್ಟಿನ ಬೆಳ್ತಂಗಡಿ ಘಟಕದ ಪದಾಧಿಕಾರಿಗಳಲ್ಲದೆ, ಗ್ರಾಮದ ಇನ್ನೋರ್ವ ಹಿರಿಯ ಕಲಾವಿದ ಚಂದ್ರಶೇಖರ ಗೌಡ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ಯಾಮರಾಜ್, ನಾಟ್ಯ ಗುರು ಅರುಣ್ ಕುಮಾರ್, ಶಾಲಾ ಮುಖ್ಯ ಗುರು ಕೃಷ್ಣ ಮೂರ್ತಿ, ಶಾಲಾ ಸಮಿತಿ ಸದಸ್ಯರು, ಸಹಶಿಕ್ಷಕರು, ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಸುಮಾರು 40ಕ್ಕೂ ಹೆಚ್ಚು ಮಕ್ಕಳು ಈ ನಾಟ್ಯತರಬೇತಿಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಸಹಶಿಕ್ಷಕ ಪ್ರಕಾಶ್ ಸ್ವಾಗತಿಸಿದರು. ಶಾಲಾ ಸಹಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕ ಜಯಂತ್ ಧನ್ಯವಾದವಿತ್ತರು.