ಅಳದಂಗಡಿ: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯ ರೂ.9 ಲಕ್ಷ ಸಿ.ಎಸ್.ಆರ್ ಅನುದಾನದಿಂದ ನೀಡಿದ ಸುಸಜ್ಜಿತ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರಯೋಗಾಲಯ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮ ಜೂ.21ರಂದು ನಡೆಯಿತು. ಎಂ.ಆರ್.ಪಿ.ಎಲ್ ಸಂಸ್ಥೆಯ ಇನ್ಫಾರ್ಮಶನ್ ಸೈನ್ಸ್ ವಿಭಾಗದ ಚೀಫ್ ಜನರಲ್ ಮ್ಯಾನೇಜರ್ ಅಳದಂಗಡಿ ಅರ್ವಗುತ್ತು ಶರತ್ ಬುಡಾಲೆ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಸತತ ಪರಿಶ್ರಮ ಏಕಾಗ್ರತೆಯಿಂದ ಜ್ಞಾನ ಸಂಪಾದಿಸಿ ಸಮಾಜದಲ್ಲಿ ಉತ್ತಮ ಸಾಧಕರಾಗಬೇಕು ಪ್ರಯೋಗಾಲಯದ ಜ್ಞಾನವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಡೆದು ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಬೇಕು ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಳದಂಗಡಿ ಅಧ್ಯಕ್ಷೆ ಸರಸ್ವತಿ, ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿ, ಇಂಜಿನಿಯರ್ ಪ್ರತೀಕ್ ಶೆಟ್ಟಿ ನೊಚ್ಚ, ಪ್ರೌಢಶಾಲಾ ಹಿರಿಯ ಶಿಕ್ಷಕ ಚಂದ್ರಶೇಖರ್ ರಾವ್ ಉಪಸ್ಥಿತರಿದ್ದು ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಸನ್ನಿ ಕೆ.ಎಂ ವಹಿಸಿ ಎಂ.ಆರ್.ಪಿ.ಎಲ್ ಸಂಸ್ಥೆಯ ಆಡಳಿತ ಮಂಡಳಿಗೆ ಕೃತಜ್ಞತೆಯನ್ನು ಸಲ್ಲಿಸಿ ಮುಂದೆಯೂ ಕಾಲೇಜಿನ ಅಭಿವೃದ್ಧಿಗೆ ಸಹಕಾರವನ್ನು ಕೋರಿದರು.

ಅನುದಾನ ಒದಗಿಸಲು ಕಾರಣೀಕರ್ತ ಚೀಫ್ ಜನರಲ್ ಮ್ಯಾನೇಜರ್ ಶರತ್ ಬುಡಾಲೆ ಹಾಗೂ ಸುಸಜ್ಜಿತ ಪ್ರಯೋಗಾಲಯವನ್ನು ನಾವಿನ್ಯ ರೂಪದಲ್ಲಿ ನಿರ್ಮಿಸಿದ ಇಂಜಿನಿಯರ್ ಪ್ರತೀಕ್ ಶೆಟ್ಟಿ ನೊಚ್ಚ ಅವರನ್ನು ಸಂಸ್ಥೆಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಉಪನ್ಯಾಸಕ ವೃಂದದವರು ಸಹಕಾರ ನೀಡಿದರು. ಅರ್ಥಶಾಸ್ತ್ರ ಉಪನ್ಯಾಸಕ ಹರೀಶ್ ರೈ ಸ್ವಾಗತಿಸಿದರು. ಕಾರ್ಯಕ್ರಮವನ್ನು ಜೀವಶಾಸ್ತ್ರ ಉಪನ್ಯಾಸಕ ಪ್ರಶಾಂತ್ ನಿರೂಪಿಸಿ, ಗಣಿತ ಉಪನ್ಯಾಸಕ ಸದಾನಂದ ಕುಲಾಲ್ ವಂದಿಸಿದರು.