ಲಾಯಿಲ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ “ಜನ ವಿರೋಧಿ ನೀತಿ”ಗಳನ್ನು ಖಂಡಿಸಿ ಜೂ.23ರಂದು ಲಾಯಿಲ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧಾಕರ ಬಿ.ಎಲ್., ಅವರು ಮಾತನಾಡಿ ರಾಜ್ಯ ಸರ್ಕಾರದ ವೈಫಲ್ಯವನ್ನು ಸಾರ್ವಜನಿಕರ ಮುಂದೆ ಬಿಚ್ಚಿಟ್ಟರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಂಡಲ ಕಾರ್ಯದರ್ಶಿ ಗಿರೀಶ್ ಡೋಂಗ್ರೆ, ಕಟ್ಟಡ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಯನ್ನು ವಿವರಿಸಿದರು. ಯುವ ಮೋರ್ಚಾ ಮಂಡಲ ಉಪಾಧ್ಯಕ್ಷ ಗಣೇಶ್ ಆರ್. ಸ್ವಾಗತಿಸಿದರು. ಲಾಯಿಲ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ, ಪಕ್ಷದ ವತಿಯಿಂದ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರವನ್ನು ಓದಿದರು.

ಲಾಯಿಲ ಶಕ್ತಿ ಕೇಂದ್ರ ಅಧ್ಯಕ್ಷ ಗಣೇಶ್ ಸಫಲ್ಯ, ತಾಲೂಕು ಸಹಕಾರ ಭಾರತಿ ಅಧ್ಯಕ್ಷ ವೆಂಕಪ್ಪಯ್ಯ ಭಟ್, ಮಂಡಲ ಕಾರ್ಯದರ್ಶಿ ಆಶಾ ಸಾಲ್ಡನ, ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಾಂಜಲ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರುಕ್ಮಯ ಕನ್ನಾಜೆ, ಗ್ರಾಮ ಪಂಚಾಯತ್ ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬೂತ್ ಸಮಿತಿ ಅದ್ಯಕ್ಷರು, ಕಾರ್ಯದರ್ಶಿ, ಸಿ.ಎ ಬ್ಯಾಂಕ್ ನಿರ್ದೇಶಕರು, ಹಾಲಿನ ಸೊಸೈಟಿ ನಿರ್ದೇಶಕರು, ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು. ಬೂತ್ 66ರ ಕಾರ್ಯದರ್ಶಿ ಜಗದೀಶ್ ಕನ್ನಾಜೆ ಧನ್ಯವಾದಗೈದರು.